
ವಿಜಯ್ ಹಜಾರೆ ಟೂರ್ನಿಯ ಸೆಮಿಫೈನಲ್ ಹೋರಾಟದಲ್ಲಿ ಇಂದು ಕರ್ನಾಟಕ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದೆ. ಈ ಹಣಾಹಣಿಯಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮುಂಬೈ ತಂಡ ಇದರ ಲಾಭವನ್ನು ಪಡೆದು ರನ್ ಹೊಳೆಯನ್ನೇ ಹರಿಸಿದೆ. 322 ರನ್ಗಳನ್ನು ಗಳಿಸಿದ ಮುಂಬೈ ಆಲೌಟ್ ಆಗಿದೆ.
ಮುಂಬೈ ತಂಡದ ಪರವಾಗಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಿರುವ ಪೃಥ್ವಿ ಶಾ ಸೆಮಿಫೈನಲ್ ಹೋರಾಟದಲ್ಲೂ ಮುಂಬೈ ತಂಡಕ್ಕೆ ಆಸರೆಯಾಗಿದ್ದಾರೆ. ಕರ್ನಾಟಕದ ವಿರುದ್ಧ ಪೃಥ್ವಿ ಶಾ ಮತ್ತೊಂದು ದೊಡ್ಡ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ. ಪೃಥ್ವಿ ಶಾ ಈ ಪಂದ್ಯದಲ್ಲಿ ಭರ್ಜರಿ 165 ರನ್ಗಳನ್ನು ಗಳಿಸಿದರು. ಇದಕ್ಕಾಗಿ ಅವರು ಬಳಸಿದ್ದು 122 ಎಸೆತಗಳನ್ನು ಮಾತ್ರ. ಈ ಭರ್ಜರಿ ಇನ್ನಿಂಗ್ಸ್ನಲ್ಲಿ 7 ಸಿಕ್ಸರ್ ಹಾಗೂ 17 ಬೌಂಡರಿಗಳು ಇದ್ದವು.
ಮುಂಬೈ ತಂಡದ ಪರವಾಗಿ ಪೃಥ್ವಿ ಶಾ ಹೊರತು ಪಡಿಸಿದರೆ ಶಾಮ್ಸ್ ಮುಲಾನಿ 45 ರನ್ಗಳಿಸಿದ್ದು ಅತ್ಯಧಿಕ ಮೊತ್ತವಾಗಿದೆ. ಶಿವಂ ದುಬೆ 27 ರನ್ಗಳ ಕೊಡುಗೆ ನೀಡಿದರೆ ಅಮನ್ ಹಕೀಂ ಖಾನ್ 25 ರನ್ ಬಾರಿಸಿದರು.
ಕರ್ನಾಟಕ ತಂಡದ ಪರವಾಗಿ ವೈಶಾಕ್ ವಿಜಯ್ ಕುಮಾರ್ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಪ್ರಸಿಧ್ ಕೃಷ್ಣ 3 ವಿಕೆಟ್ ಉರುಳಿಸಿದರು. ರೋನಿತ್ ಮೋರೆ, ಶ್ರೇಯಸ್ ಗೋಪಾಲ್ ಹಾಗೂ ಕೆ ಗೌತಮ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.
ಕರ್ನಾಟಕ ಮುಂಬೈ ತಂಡ ನೀಡಿದ ಈ ಬೃಹತ್ ಗುರಿಯನ್ನು ಬೆನ್ನಟ್ಟಲು ಆರಂಭಿಸಿದೆ. ಆದರೆ ನಾಯಕ ಆರ್ ಸಮರ್ಥ್ ಅವರ ವಿಕೆಟ್ಅನ್ನು ಶೀಘ್ರದಲ್ಲಿಯೇ ಕಳೆದುಕೊಂಡಿದ್ದು ಆರಂಭಿಕ ಆಘಾತವನ್ನು ಅನುಭವಿಸಿದೆ.