
ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಎಲೈಟ್ ಗ್ರೂಪ್ ಎಯ ಮುಂಬೈ-ರೈಲ್ವೇಸ್ ಮುಖಾಮುಖಿಯಲ್ಲಿ ಮುಂಬೈ ತಂಡ ಭರ್ಜರಿ 173 ರನ್ ಗೆಲುವು ಸಾಧಿಸಿದೆ. ಪೃಥ್ವಿ ಶಾ ಮತ್ತು ಶ್ರೇಯಸ್ ಐಯ್ಯರ್ ಅಮೋಘ ಶತಕದ ನೆರವಿನಿಂದ ಮುಂಬೈ ನೂರೈವತ್ತಕ್ಕೂ ಅಧಿಕ ರನ್ ನಿಂದ ಜಯ ಗಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈಯಿಂದ ಆರಂಭಿಕ ಆಟಗಾರ ಪೃಥ್ವಿ ಶಾ 129 ರನ್ ಗಳಿಸಿದರು. ನಾಯಕ ಅಜಿಂಕ್ಯ ರಹಾನೆ ಬೇಗನೆ ಔಟಾದರಾದರೂ (3 ರನ್) ಶ್ರೇಯಸ್ ಐಯ್ಯರ್ 144 ರನ್, ಸೂರ್ಯ ಕುಮಾರ್ ಯಾದವ್ 67 ರನ್ ಪೇರಿಸಿದ್ದು ತಂಡಕ್ಕೆ ರನ್ ಬಲ ತುಂಬಿತು.
ರಹಾನೆ ಬಳಗ 50 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು ಭರ್ತಿ 400 ಗರಿಷ್ಟ ರನ್ ಪೇರಿಸಿ ಎದುರಾಳಿಗೆ 401 ರನ್ ಗುರಿ ನೀಡಿತು. ಚೇಸಿಂಗ್ ಗೆ ಇಳಿದ ರೈಲ್ವೇಸ್ ನಿಂದ ಅದ್ಭುತ ಆಟವೇನೂ ಕಂಡು ಬರಲಿಲ್ಲ. ನಾಯಕ ಸೌರಭ್ ವಾಕಸ್ಕರ್ 48, ಮೃಣಾಲ್ ದೇವಧಾರ್ 36, ಪ್ರಶಾಂತ್ ಆವಸ್ತಿ 41 ಮತ್ತು ಅಂಕಿತ್ ಯಾದವ್ ಅಜೇಯ 35 ಸೇರಿಸಿದ್ದು ಹೆಚ್ಚೆನಿಸಿತು.
42.4 ಓವರ್ ಮುಕ್ತಾಯಕ್ಕೆ ರೈಲ್ವೇಸ್ ಎಲ್ಲಾ ವಿಕೆಟ್ ಕಳೆದು ಕೇವಲ 227 ರನ್ ಪೇರಿಸಲಷ್ಟೇ ಶಕ್ತವಾಯಿತು. ಹೀಗಾಗಿ ರೈಲ್ವೇಸ್ ದಾಖಲೆಯ 173 ರನ್ ಸೋಲನುಭವಿಸಿತು. ರೈಲ್ವೇಸ್ ಇನ್ನಿಂಗ್ಸ್ ವೇಳೆ ಮುಂಬೈಯ ಶ್ಯಾಮ್ಸ್ ಮುಲಾನಿ 26 ರನ್ನಿಗೆ 3 ವಿಕೆಟ್ ಉರುಳಿಸಿ ಮಿಂಚಿದರು.