ರಾಜ್ಕೋಟ್ ಮೈದಾನದಲ್ಲಿ ಗುರುವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಸೀಮಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ 43.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ರಾಜಸ್ಥಾನದ ಫೈನಲ್ ಪಂದ್ಯವನ್ನು ಹರಿಯಾಣ ವಿರುದ್ಧ ಆಡಲಿದೆ. ಡಿಸೆಂಬರ್ 16 ರ ಶನಿವಾರದಂದು ರಾಜ್ಕೋಟ್ನಲ್ಲಿಯೇ ಫೈನಲ್ ಪಂದ್ಯ ನಡೆಯಲಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಯಿತು. ಆರಂಭಿಕರಾದ ನಾಯಕ ಮಯಾಂಕ್ ಅಗರ್ವಾಲ್ 13 ರನ್ ಗಳಿಸಿ ಔಟಾದರು. ಆರ್ ಸಮರ್ಥ್ ಕೇವಲ 8 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ನಿಕಿನ್ ಜೋಸ್ 21 ರನ್ ಹಾಗೂ ಕೃಷ್ಣನ್ ಶ್ರೀಜಿತ್ 37 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. 87 ರನ್ ಗಳಿಸುವಷ್ಟರಲ್ಲಿ ಕರ್ನಾಟಕ 4 ವಿಕೆಟ್ ಕಳೆದುಕೊಂಡಿತ್ತು.

ಇಲ್ಲಿಂದ ಅಭಿನವ್ ಮನೋಹರ್ ಮತ್ತು ಮನೀಶ್ ಪಾಂಡೆ ಇನ್ನಿಂಗ್ಸ್ ಕಟ್ಟಿದರು. ಇಬ್ಬರ ನಡುವೆ 89 ರನ್ಗಳ ಜೊತೆಯಾಟ ಮೂಡಿ ಬಂದಿತು. ಪಾಂಡೆ 28 ರನ್ ಗಳಿಸಿ ಔಟಾದರು. ಮನೋಹರ್ ಮತ್ತು ಮನೋಜ್ ಭಾಂಗ್ಡೆ ನಡುವೆ 68 ಎಸೆತಗಳಲ್ಲಿ 95 ರನ್ ಗಳ ಜೊತೆಯಾಟ ಕರ್ನಾಟಕದ ಇನಿಂಗ್ಸ್ ಗೆ ಬಲ ತುಂಬಿತು. ಮನೋಹರ್ 91 ರನ್ ಮತ್ತು ಭಾಂಗ್ಡೆ 63 ರನ್ಗಳ ಇನ್ನಿಂಗ್ಸ್ ಕಟ್ಟಿದರು. ರಾಜಸ್ಥಾನದ ಪರ ಅನಿಕೇತ್ ಚೌಧರಿ ಮತ್ತು ಕುಕ್ನಾ ಅಜಯ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.
ರಾಜಸ್ಥಾನದ ಆರಂಭವೂ ಕಳಪೆಯಾಗಿತ್ತು. ಇಬ್ಬರೂ ಆರಂಭಿಕರು ಬೇಗನೆ ಪೆವಿಲಿಯನ್ ಸೇರಿದರು. ಮಹಿಪಾಲ್ ಲೊಮ್ರೋರ್ ಕೂಡ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದರು. ರಾಜಸ್ಥಾನ 23 ರನ್ಗಳಿಗೆ 3 ವಿಕೆಟ್ ಪಡೆದಿತ್ತು. ಇಲ್ಲಿಂದ ನಾಯಕ ದೀಪಕ್ ಹೂಡಾ ಮತ್ತು ಕರಣ್ ಲಂಬಾ ಇನಿಂಗ್ಸ್ ಮುನ್ನಡೆಸಿದರು. ಈ ಜೋಡಿ 225 ರನ್ಗಳ ಜೊತೆಯಾಟವನ್ನು ನೀಡಿತು. ಈ ಕಾರಣದಿಂದಾಗಿ ತಂಡವು 43.4 ಓವರ್ಗಳಲ್ಲಿ ಗುರಿಯನ್ನು ಬೆನ್ನಟ್ಟಿ ಸಂಭ್ರಮಿಸಿತು.

ಹೂಡಾ 180 ರನ್ ಗಳಿಸಿ ಔಟಾದರೆ, ಕರಣ್ ಲಂಬಾ 73 ರನ್ ಗಳಿಸಿ ಅಜೇಯರಾಗಿ ಉಳಿದರು. ಕರ್ನಾಟಕ ಪರ ವಾಸುಕಿ ಕೌಶಿಕ್, ವಿಜಯಕುಮಾರ್ ವೈಶಾಖ್, ಮನೋಜ್ ಬಾಂಗ್ಡೆ ಮತ್ತು ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಪಡೆದರು.