ದೇಶೀಯ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಶನಿವಾರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ.
ರಾಜಕೋಟ್ನಲ್ಲಿ ನಡೆಯುವ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಪಂದ್ಯವನ್ನು ಗೆದ್ದು ಕರ್ನಾಟಕ ಮತ್ತೊಮ್ಮೆ ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಕರ್ನಾಟಕ ಎಂಟರ ಘಟಕ್ಕೆ ಪ್ರವೇಶ ಪಡೆದಿತ್ತು. ಲೀಗ್ ಹಂತದಲ್ಲಿ ಆಡಿರುವ 7 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿರುವ ಕರ್ನಾಟಕ 24 ಅಂಕಗಳನ್ನು ಕಲೆ ಹಾಕಿದೆ. ಇನ್ನು ವಿದರ್ಭ ಬಿ ಗುಂಪಿನಲ್ಲಿ ಅಗ್ರ ಸ್ಥಾನೀಯವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.

ಕರ್ನಾಟಕದ ಸಂಘಟಿತ ಆಟದ ಮೇಲೆ ಹೆಚ್ಚು ನಂಬಿಕೆಯನ್ನು ಇಟ್ಟುಕೊಂಡಿದೆ. ಕರ್ನಾಟಕ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ತಂಡದ ಸ್ಟಾರ್ ಪ್ಲೇಯರ್ ದೇವದತ್ ಪಡಿಕ್ಕಲ್ ಪ್ರಸಕ್ತ ಋತುವಿನಲ್ಲಿ ಅಮೋಘ ಫಾರ್ಮ್ನಲ್ಲಿದ್ದಾರೆ. ದೇವದತ್ ಆಡಿರುವ 5 ಪಂದ್ಯಗಳಲ್ಲಿ 2 ಶತಕ ಹಾಗೂ 3 ಅರ್ಧಶತಕ ಒಳಗೊಂಡಂತೆ 465 ರನ್ ಸಿಡಿಸಿದ್ದಾರೆ.
ಉಳಿದಂತೆ ಭರವಸೆಯ ಆಟಗಾರ ಮನೀಷ್ ಪಾಂಡೆ 239, ನಿಕಿನ್ ಜೋಸ್ 259, ಮಯಾಂಕ್ ಅಗರ್ವಾಲ್ 264, ಆರ್.ಸಮರ್ಥ್ 146 ರನ್ ಸಿಡಿಸಿದ್ದಾರೆ.
ಕರ್ನಾಟಕದ ಪರ ವಾಸುಕಿ ಕೌಶಿಕ್ ಬಿಗುವಿನ ದಾಳಿ ನಡೆಸಿ ಮಿಂಚಿದ್ದಾರೆ. ಇವರು ಆಡಿದ 7 ಪಂದ್ಯಗಳಲ್ಲಿ 16 ವಿಕೆಟ್ ಸಾಧನೆ ಮಾಡಿದ್ದಾರೆ. ಉಳಿದಂತೆ ವಿ ವೈಶಾಖ್, ಆಲ್ ರೌಂಡರ್ ಕೆ.ಗೌತಮ್, ಜೆ.ಸುಚಿತ್, ವಿ.ಕಾವೇರಪ್ಪಾ ಸಹ ವಿಕೆಟ್ ಬೇಟೆ ನಡೆಸಬಲ್ಲರು.
ವಿದರ್ಭ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಕರ್ನಾಟಕದಿಂದ ವಲಸೆ ಹೋಗಿರುವ ಕರುಣ್ ನಾಯರ್ ಈ ತಂಡಕ್ಕೆ ಬ್ಯಾಟಿಂಗ್ ಶಕ್ತಿ ತುಂಬಿದ್ದಾರೆ. ಉಳಿದಂತೆ ಅಮನ್ ಮೊಖಾಡೆ, ಧ್ರುವ ಶೋರೆ, ಅಥರ್ವ ತೈದೆ ಸಹ ಬ್ಯಾಟಿಂಗ್ ನಲ್ಲಿ ರನ್ ಕಲೆ ಹಾಕಬಲ್ಲರು. ಬೌಲಿಂಗ್ನಲ್ಲಿ ದರ್ಶನ್ ನಲ್ಕಂಡೆ, ಅಕ್ಷಯ್ ಕರ್ನೇವರ್ ಎದುರಾಳಿ ಬ್ಯಾಟರ್ಗಳನ್ನು ಕಾಡಬಲ್ಲರು. ಅಲ್ಲದೆ ವಿಕೆಟ್ ಬೇಟೆ ನಡೆಸಿ ತಂಡಕ್ಕೆ ನೆರವಾಗಬಲ್ಲರು.
ಉಳಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳ, ಮಹಾರಾಷ್ಟ್ರವನ್ನು, ಬೆಂಗಾಲ್, ಗುಜರಾತ್ ತಂಡವನ್ನು, ಮುಂಬೈ ತಮಿಳುನಾಡು ತಂಡವನ್ನು ಎದುರಿಸಲಿದೆ.