ಬೆಂಗಳೂರು, ಜನವರಿ 13: ಟಿವಿ ಶೋವೊಂದರಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣಕ್ಕೆ ಅಮಾನತುಗೊಂಡಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರ ಬದಲಿಗೆ ಬೇರೆ ಆಟಗಾರರರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.
ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್ ಅವರು ಹಾರ್ದಿಕ್ ಪಾಂಡ್ಯ ಬದಲಿಗೆ ತಂಡವನ್ನು ಸೇರಲಿದ್ದಾರೆ. ಪಂಜಾಬಿನ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಅವರು ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾಗಿದ್ದಾರೆ. ಅಂಡರ್ 19 ವಿಶ್ವಕಪ್, ರಣಜಿ ಟ್ರೋಫಿಯ ಸಾಧನೆ ಗಿಲ್ ಅವರನ್ನು ಟೀಂ ಇಂಡಿಯಾಕ್ಕೆ ಸೇರುವಂತೆ ಮಾಡಿದೆ.
ಹಾರ್ದಿಕ್, ರಾಹುಲ್ ಹೇಳಿಕೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ
ಮಯಾಂಕ್ ಏಕಿಲ್ಲ: ವಿಜಯ್ ಶಂಕರ್ ಜತೆಗೆ ಕರ್ನಾಟಕದ ಮಯಾಂಕ್ ಅಗರವಾಲ್ ಅವರು ಆಯ್ಕೆಯಾಗುವ ಸುದ್ದಿ ಸಿಕ್ಕಿತ್ತು. ಕೆಎಲ್ ರಾಹುಲ್ ಬದಲಿಗೆ ಮಯಾಂಕ್ ಆಯ್ಕೆ ಖಚಿತವಾಗಿತ್ತು. ಆದರೆ, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಯಾಂಕ್ ಅವರು ಇನ್ನು ಚೇತರಿಸಿಕೊಳ್ಳದ ಕಾರಣ, ಆಯ್ಕೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಬಾಲಿವುಡ್ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರ ನಡೆಸಿಕೊಡುವ "ಕಾಫಿ ವಿತ್ ಕರಣ್" ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಪಾಂಡ್ಯ ಮತ್ತು ರಾಹುಲ್,ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಹಿಳೆಯರ ಕುರಿತಾಗಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ವ್ಯಾಪಕವಾಗಿ ಟೀಕೆಗಳು ಕೇಳಿ ಬಂದವು,
ಬಿಸಿಸಿಐ ಕೂಡಾ ಇಬ್ಬರನ್ನು ಏಕದಿನ ಪಂದ್ಯ ಆಡದಂತೆ ನಿಷೇಧ ಹೇರಿದೆ. ತನಿಖೆ ಪೂರ್ಣಗೊಳ್ಳುವ ತನಕ ಕ್ರಿಕೆಟ್ ಆಡುವುದು ಸದ್ಯವಿಲ್ಲದ ಕಾರಣ ಇಬ್ಬರು ಕೂಡಾ ಈಗ ಭಾರತಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲದೆ, ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಇಬ್ಬರು ಅಲಭ್ಯರಾಗುವ ಸಾಧ್ಯತೆಯಿದೆ.