
ಲಂಡನ್, ಜುಲೈ 1: ಗಾಯಕ್ಕೀಡಾಗಿರುವ ಆಲ್ ರೌಂಡರ್ ವಿಜಯ್ ಶಂಕರ್ ಅವರು ಐಸಿಸಿ ವಿಶ್ವಕಪ್ 2019ರಿಂದ ಹೊರ ಬಿದ್ದಿದ್ದಾರೆ. ವಿಜಯ್ ಸ್ಥಾನಕ್ಕೆ ಟೀಮ್ ಇಂಡಿಯಾದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ಸ್ಥಾನ ನೀಡಲಾಗಿದೆ. ಮಯಾಂಕ್ ಅಗರ್ವಾಲ್ ಭಾರತದ 15 ಜನರ ತಂಡದಲ್ಲಿ ಸೇರಿಕೊಳ್ಳಲಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
28ರ ಹರೆಯದ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ಆಗಿ ಗಮನ ಸೆಳೆದವರು. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ್ದ ಮಯಾಂಕ್, ಏಕದಿನ ಮಾದರಿಯಲ್ಲಿ ಇನ್ನೂ ಭಾರತ ಪ್ರತಿನಿಧಿಸಿಲ್ಲ.
'ಅಭ್ಯಾಸದ ವೇಳೆ ಜಸ್ಪ್ರೀತ್ ಬೂಮ್ರಾ ಎಸೆತಕ್ಕೆ ವಿಜಯ್ ಶಂಕರ್ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಟೂರ್ನಿಯಲ್ಲಿ ವಿಜಯ್ ಶಂಕರ್ ಇನ್ನು ಭಾಗವಹಿಸಲಾಗುತ್ತಿಲ್ಲ. ಅವರು ತವರಿಗೆ ವಾಪಸ್ಸಾಗುತ್ತಿದ್ದಾರೆ' ಎಂದು ಬಿಸಿಸಿಐ ಅಧಿಕಾರಿಗಳು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಗಾಯದ ಕಾರಣದಿಂದಲೇ ಭಾನುವಾರ (ಜೂನ್ 30) ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ವಿಜಯ್ ಶಂಕರ್ ಪಾಲ್ಗೊಂಡಿರಲಿಲ್ಲ. ಈ ಪಂದ್ಯದಲ್ಲಿ ವಿಜಯ್ ಸ್ಥಾನದಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ರಿಷಬ್ ಪಂತ್ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ್ದರು. ಪಂತ್ ಈ ಪಂದ್ಯದಲ್ಲಿ 29 ಎಸೆತಗಳಿಗೆ 32 ರನ್ ಗಳಿಸಿದ್ದರು.