
ಕೋಲ್ಕತ್ತಾ, ಮೇ 1: ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿರುವ ತಮಿಳುನಾಡು ಆಲ್ ರೌಂಡರ್ ವಿಜಯ್ ಶಂಕರ್ ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬೆಂಬಲಿಸಿದ್ದಾರೆ. ಪ್ರತಿಷ್ಠಿತ ಟೂರ್ನಿಯಲ್ಲಿ ವಿಜಯ್ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸವನ್ನು ಗಂಗೂಲಿ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಆಟಗಾರ ಅಂಬಾಟಿ ರಾಯುಡು ಬದಲಿಗೆ ವಿಜಯ್ ಶಂಕರ್ಗೆ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿದ್ದಕ್ಕೆ ಕ್ರಿಕೆಟ್ ವಲಯದಲ್ಲಿ ಚರ್ಚೆ ಶುರುವಾಗಿತ್ತು. ಆದರೆ ವಿಜಯ್ ಆಯ್ಕೆ ಸಮರ್ಥಿಸಿಕೊಂಡಿದ್ದ ಆಯ್ಕೆ ಸಮಿತಿ, ಶಂಕರ್ ಮೂರು ಆಯಾಮಗಳ ಕೌಶಲವುಳ್ಳ (ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್) ಆಟಗಾರ ಎಂದಿತ್ತು. ಇದೀಗ ಮಾಜಿ ನಾಯಕನ ಬೆಂಬಲವೂ ಶಂಕರ್ಗೆ ಲಭಿಸಿದೆ.
ವಿಜಯ್ ಶಂಕರ್ ಕುರಿತು ಮಾತನಾಡಿದ ಬಂಗಾಳ ಹುಲಿ ಗಂಗೂಲಿ, 'ವಿಜಯ್ ಉತ್ತಮ ಯುವ ಕ್ರಿಕೆಟಿಗ. ವಿಶ್ವಕಪ್ನಲ್ಲಿ ಅವರು ಚೆನ್ನಾಗಿ ಆಡಲಿದ್ದಾರೆ. ಇಂಗ್ಲೆಂಡ್ ಪರಿಸ್ಥಿತಿಗೆ ಅವರ ಬೌಲಿಂಗ್ ಹೆಚ್ಚು ಸೂಕ್ತವಾಗಿದೆ. ಶಂಕರ್ ಬಗ್ಗೆ ನಕಾರಾತ್ಮಕವಾಗಿ ಭಾವಿಸದಿರೋಣ' ಎಂದರು.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಾರ್ಗದರ್ಶಕರಾಗಿರುವ ದಾದಾ ಪಿಟಿಐ ಜೊತೆ ಮಾತನಾಡುತ್ತ, 'ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅವರು ಚೆನ್ನಾಗಿ ಆಡಿದ್ದಕ್ಕೇ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿದೆ' ಎನ್ನುವ ಮೂಲಕ ವಿಶ್ವಕಪ್ ತಂಡದಲ್ಲಿ ಶಂಕರ್ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.