
ನವದೆಹಲಿ, ಆಗಸ್ಟ್ 23: ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಸ್ಥಾನವನ್ನು ವಿಕ್ರಮ್ ರಾತೋರ್ ಆವರಿಸಿಕೊಂಡಿದ್ದಾರೆ. 2019ರ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿದ ಬಳಿಕ ಬ್ಯಾಟಿಂಗ್ ವಿಭಾಗದ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಈಗ ಬ್ಯಾಟಿಂಗ್ ಕೋಚ್ ಸ್ಥಾನದಲ್ಲಿ ಬದಲಾವಣೆಯಾಗಿದೆ.
ನಾಲ್ಕನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಈಗಲೂ ಸ್ಥಿರ ಬ್ಯಾಟ್ಸ್ಮನ್ ಇಲ್ಲದಿರುವುದೂ ಭಾರತದ ಬ್ಯಾಟಿಂಗ್ ವಿಭಾಗದ ಬಗೆಗಿನ ಅಸಮಾಧಾನಕ್ಕೆ ಇನ್ನೊಂದು ನೆಪವಾಗಿತ್ತು. ಆದರೆ ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ವಿವಿಧ ಬೆಂಬಲ ಸಿಬ್ಬಂದಿ ಜವಾಬ್ದಾರಿಗಳಿಗೆ ಸಂಬಂಧಿಸಿ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಸುಮಾರು 4 ದಿನಗಳಿಂದ ಒಟ್ಟು 88 ಅಭ್ಯರ್ಥಿಗಳ ಸಂದರ್ಶನ ನಡೆಸಿದ್ದರು. ಗುರುವಾರ (ಆಗಸ್ಟ್ 22) ಬೆಂಬಲ ಸಿಬ್ಬಂದಿಗಳನ್ನು ಘೋಷಿಸಲಾಗಿದೆ.
'ನೀವು ಕಳೆದ 5 ವರ್ಷಗಳನ್ನು ಗಮನಿಸಿದರೆ, ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಿಸಿರುವುದನ್ನು ಖಂಡಿತಾ ಗಮನಿಸುತ್ತೀರಿ. ಆದರೆ ಟೆಸ್ಟ್ ಚಾಂಪಿಯನ್ಷಿಪ್ ಮತ್ತು ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹೊಸತನ ಬೇಕೆನಿಸಿದೆ. ಹೀಗಾಗಿ ನಾವು ವಿಕ್ರಮ್ ರಾತೋರ್ ಅವರನ್ನು ಆರಿಸುತ್ತಿದ್ದೇವೆ,' ಎಂದು ಎಂಎಸ್ಕೆ ಪ್ರಸಾದ್ ತಿಳಿಸಿದ್ದಾರೆ.