ಬೆಂಗಳೂರು, ಅಕ್ಟೋಬರ್ 07 : 84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದ ಆಟಗಾರರ ಪಟ್ಟಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ) ಶನಿವಾರ ಪ್ರಕಟಿಸಿದೆ.
16 ಆಟಗಾರರನ್ನು ಒಳಗೊಂಡ ಕರ್ನಾಟಕ ರಣಜಿ ತಂಡವನ್ನು 33 ವರ್ಷದ ದಾವಣಗೆರೆ ಎಕ್ಸ್ ಪ್ರೆಸ್ ಆರ್. ವಿನಯ್ ಕುಮಾರ್ ಮುನ್ನಡೆಸಲಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅನುಭವ ಹೊಂದಿರುವ ವಿನಯ್ ಕುಮಾರ್ 400 ವಿಕೆಟ್ ಕಬಳಿಸಿದ್ದಾರೆ. ಇದೇ ಅಕ್ಟೋಬರ್ 14 ರಂದು ಕರ್ನಾಟಕ ತಂಡ ಮೊದಲ ಗುಂಪಿನ ಮೊದಲ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಎದುರಿಸಲಿದೆ.

ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭಾರತ ಆಸ್ಟ್ರೇಲಿಯಾ ವಿರುದ್ಧ ಟಿ20ಯಲ್ಲಿ ಆಡುತ್ತಿರುವುದರಿಂದ ಈ ಬಾರಿ ಕರ್ನಾಟಕ ತಂಡದಿಂದ ಹೊರಗುಳಿದಿದ್ದಾರೆ.
ಇನ್ನು ಭಾರತ 'ಎ' ತಂಡದ ಪರವಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿರುವ ಕರುಣ್ ನಾಯರ್ ಸಹ ರಣಜಿಯಲ್ಲಿ ಆಡುತ್ತಿಲ್ಲ.
ಹೀಗಾಗಿ ಕರ್ನಾಟಕ ತಂಡ ಇಬ್ಬರು ಸ್ಟಾರ್ ಬ್ಯಾಟ್ಸ್ ಮನ್ ಗಳ ಅನುಪಸ್ಥಿತಿಯಲ್ಲಿ 84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ.
ಕರ್ನಾಟಕ ರಣಜಿ ತಂಡ ಇಂತಿದೆ: ವಿನಯ್ ಕುಮಾರ್ (ನಾಯಕ), ಆರ್ ಸಮರ್ಥ್, ಸಿಎಂ ಗೌತಮ್ (ವಿಕೆಟ್ ಕೀಪರ್), ಅಭಿಶೇಕ್ ರೆಡ್ಡಿ, ಮಯಾಂಕ್ ಅಗರವಾಲ್, ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಕೆ. ಗೌತಮ್, ಮಿರ್ ಕೌನೈನ್ ಅಬ್ಬಾಸ್, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಡಿ ನಿಶ್ಚಲ್, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ರೋನಿತ್ ಮೋರೆ.
ಕೋಚ್: ಮಾಜಿ ಆಟಗಾರ ಪಿ.ವಿ ಶಶಿಕಾಂತ್.