ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಇದರ ಬೆನ್ನಲೇ ಆಸ್ಪತ್ರೆಯಲ್ಲಿ ಅವರು ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿನೋದ್ ಕಾಂಬ್ಳಿ ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಕೂಡ ಹೆಜ್ಜೆ ಹಾಕಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಕಾಂಬ್ಳಿ ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ವಿನೋದ್ ಕಾಂಬ್ಳಿ ಕೂಡ ಪ್ರತಿಕ್ರಿಯಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಇಲ್ಲಿಗೆ ತಲುಪಿದ್ದೇನೆ. ಆಸ್ಪತ್ರೆ ನಿರ್ದೇಶಕ ಶೈಲೇಶ್ ಠಾಕೂರ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಕಾಂಬ್ಳಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಡಿಸೆಂಬರ್ 23 ರಂದು, ಕಾಂಬ್ಳಿ ಅವರನ್ನು ಅನಾರೋಗ್ಯದ ಕಾರಣ ಭಿವಾಂಡಿಯ ಕಲ್ಹೇರ್ನಲ್ಲಿರುವ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಕೃತಿ ಆಸ್ಪತ್ರೆಯ ನಿರ್ದೇಶಕ ಶೈಲೇಶ್ ಠಾಕೂರ್ ಅವರು ಬಾಲ್ಯದಿಂದಲೂ ಕ್ರಿಕೆಟ್ ಅಭಿಮಾನಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಂಬ್ಳಿ ಅವರ ಅನಾರೋಗ್ಯದ ವೀಡಿಯೊವನ್ನು ನೋಡಿ ಶೈಲೇಶ್ ಠಾಕೂರ್ ಭಾವುಕರಾಗಿದ್ದರು. ಹೀಗಾಗ ಕಾಂಬ್ಳಿ ಅವರಿಗೆ ಸಂಪೂರ್ಣ ಚಿಕಿತ್ಸೆ ಪೂರೈಸಲು ನಿರ್ಧರಿಸಿದ್ದಾರೆ. ಪ್ರಸ್ತುತ, ಮೂವರು ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ. ಅವರನ್ನು ಇದೀಗ ತೀವ್ರ ನಿಗಾ ಘಟಕದಿಂದ ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ವಿನೋದ್ ಕಾಂಬ್ಳಿ ಅವರ ಸದ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ.ಶ್ರೀಕಾಂತ್ ಶಿಂಧೆ ಅವರು ವೈಯಕ್ತಿಕವಾಗಿ 5 ಲಕ್ಷ ರೂ.ಗಳ ನೆರವು ಘೋಷಿಸಿದ್ದಾರೆ. ಮುಂದಿನ ವಾರ ಡಾ.ಶ್ರೀಕಾಂತ್ ಶಿಂಧೆ ಫೌಂಡೇಶನ್ ಮೂಲಕ ಈ ಸಹಾಯವನ್ನು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವು ನೀಡುವುದಾಗಿ ಸಂಸದ ಡಾ.ಶ್ರೀಕಾಂತ್ ಶಿಂಧೆ ಭರವಸೆ ನೀಡಿದ್ದಾರೆ.
ಆಗಸ್ಟ್ 10 ರಂದು ವಿನೋದ್ ಕಾಂಬ್ಳಿ ಅವರ ಆರೋಗ್ಯವು ಹದಗೆಟ್ಟಿತ್ತು. ವಿನೋದ್ ಕಾಂಬ್ಳಿ ನಡೆಯಲು ಕಷ್ಟಪಡುತ್ತಿರುವುದು ವಿಡಿಯೋಗಳು ವೈರಲ್ ಆಗಿದ್ದವು. ಇಬ್ಬರು ಆತನ ಕೈ ಹಿಡಿದು ನಡೆಸಲು ಸಹಾಯ ಮಾಡುತ್ತಿದ್ದರು. ತಮ್ಮ ಪವರ್ ಫುಲ್ ಬ್ಯಾಟಿಂಗ್ ನಿಂದ ಬೌಲರ್ ಗಳ ಬೆವರಿಳಿಸಿದ ವಿನೋದ್ ಅವರ ಈ ಸ್ಥಿತಿ ನೋಡಿ ಕ್ರಿಕೆಟ್ ಪ್ರೇಮಿಗಳು ಅಳಲು ತೋಡಿಕೊಂಡಿದ್ದರು.