ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಥಾಣೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಕೆಲವು ದಿನಗಳ ನಂತರ ಅವರು ಚೇತರಿಸಿಕೊಂಡಿದ್ದಾರೆ. ಕಾಂಬ್ಳಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರು ಅವರ ಫಿಟ್ನೆಸ್ ಬಗ್ಗೆ ಅಪ್ಡೇಟ್ ನೀಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಬ್ಯಾಟ್ ಹಿಡಿದು ಕಾಂಬ್ಳಿ ಸುದ್ದಿಯಾಗಿದ್ದಾರೆ.
ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವಿನೋದ್ ಕಾಂಬ್ಳಿ ಚಿಕಿತ್ಸೆ ನಂತರ ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟ ನಂತರ ಡಿಸೆಂಬರ್ 21 ರಂದು ಥಾಣೆಯ ಭಿವಂಡಿ ನಗರದ ಕಲ್ಹಾರ್ ಪ್ರದೇಶದಲ್ಲಿರುವ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಟೀಮ್ ಇಂಡಿಯಾದ ನೀಲಿ ಜೆರ್ಸಿ ಧರಿಸಿ ಹೊರಬಂದ ಕಾಂಬ್ಳಿ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ.

ಮಂಗಳವಾರ ಆಸ್ಪತ್ರೆಯಲ್ಲಿ ಕಾಂಬ್ಳಿ ಫಿಟ್ ಆಗಿ ಕಾಣಿಸಿಕೊಂಡಿದ್ದರು. ಅವರು 'ಚಕ್ ದೇ ಇಂಡಿಯಾ' ಹಿಂದಿ ಹಾಡಿಗೆ ಆಸ್ಪತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೂ ಮೊದಲು ಕೋಚ್ ರಮಾಕಾಂತ್ ಅಚ್ರೇಕರ್ ಅವರ ಪ್ರತಿಮೆ ಸಮಾರಂಭದಲ್ಲಿ ಕಾಂಬ್ಳಿ ಬಾಲ್ಯದ ಗೆಳೆಯ ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಭಾವುಕರಾಗಿದ್ದರು. ಕಾಂಬ್ಳಿ ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಬೆಳಕಿಗೆ ಬಂದಿದೆ.
ವಿನೋದ್ ಕಾಂಬ್ಳಿ ಅವರ ಆರೋಗ್ಯದ ಬಗ್ಗೆ ಆಕೃತಿ ಹೆಲ್ತ್ ಸಿಟಿ ಆಸ್ಪತ್ರೆಯ ನಿರ್ದೇಶಕ ಮತ್ತು ಕಾಂಬ್ಳಿ ಅವರ ಕಟ್ಟಾ ಅಭಿಮಾನಿಯಾಗಿರುವ ಡಾ. ಶೈಲೇಶ್ ಠಾಕೂರ್ ಮಾಹಿತಿ ನೀಡಿದ್ದಾರೆ. ಕಾಂಬ್ಳಿ ಆಸ್ಪತ್ರೆಯಿಂದ ಹೊರಡುವ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ಶೈಲೇಶ್ ಠಾಕೂರ್, 'ಕಾಂಬ್ಳಿ ಅವರು ಈಗ ಚೆನ್ನಾಗಿದ್ದಾರೆ. ನಾನು ಅವರನ್ನು ಮರಳಿ ಮನೆಗೆ ಬಿಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿನೋದ್ ಕಾಂಬ್ಳಿ ಅವರು ಮಾತನಾಡಿದ್ದು, ಆಸ್ಪತ್ರೆ ನಿರ್ದೇಶಕ ಶೈಲೇಶ್ ಠಾಕೂರ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ವೈದ್ಯರು ನಾನು ಫಿಟ್ ಆಗಿರುವುದಾಗಿ ತಿಳಿಸಿದ್ದಾರೆ. ನಾನು ಫಿಟ್ ಆದಾಗ ಮಾತ್ರ ಹಿಂತಿರುಗುತ್ತೇನೆ ಎಂದು ಹೇಳಿದ್ದೆ. ನಾನು ವಿನೋದ್ ಕಾಂಬ್ಳಿ, ಕ್ರಿಕೆಟ್ ಆಡುವುದನ್ನು ಬಿಡುವುದಿಲ್ಲ ಎಂದಿದ್ದಾರೆ.
ಶೈಲೇಶ್ ಠಾಕೂರ್ ಅವರು ಬಾಲ್ಯದಿಂದಲೂ ಕ್ರಿಕೆಟ್ ಅಭಿಮಾನಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಂಬ್ಳಿ ಅವರ ಅನಾರೋಗ್ಯದ ವೀಡಿಯೊವನ್ನು ನೋಡಿ ಶೈಲೇಶ್ ಠಾಕೂರ್ ಭಾವುಕರಾಗಿದ್ದರು. ಆಗಸ್ಟ್ 10 ರಂದು ವಿನೋದ್ ಕಾಂಬ್ಳಿ ಅವರ ಆರೋಗ್ಯವು ಹದಗೆಟ್ಟಿತ್ತು. ಹೀಗಾಗಿ ಕಾಂಬ್ಳಿ ಅವರಿಗೆ ಸಂಪೂರ್ಣ ಚಿಕಿತ್ಸೆ ಪೂರೈಸಲು ನಿರ್ಧರಿಸಿದ್ದಾರೆ. ಇದಲ್ಲದೆ, ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ.ಶ್ರೀಕಾಂತ್ ಶಿಂಧೆ ಅವರು ವೈಯಕ್ತಿಕವಾಗಿ 5 ಲಕ್ಷ ರೂ.ಗಳ ನೆರವು ಘೋಷಿಸಿದ್ದಾರೆ.