ಭಾರತ ತಂಡದ ಖ್ಯಾತ ಮಾಜಿ ಆಟಗಾರ ವಿನೋದ್ ಕಾಂಬ್ಳೆ ಆರೋಗ್ಯದಲ್ಲಿ ಏರು ಪೇರು ಆಗಿದ್ದು ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಮುಂಬೈನ ಥಾಣೆಯಲ್ಲಿರುವ ಪ್ರಗತಿ ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಕಾಂಬ್ಳೆ ಅವರಿಗೆ ಈಗ ಏನಾಗಿದೆ? ಯಾವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಸದ್ಯ ವೈದ್ಯರ ತಂಡ ಇವರ ಆರೈಕೆ ಮಾಡುತ್ತಿದ್ದು, ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಇತ್ತೀಚಿಗೆ ಕೋಚ್ ರಮಾಕಾಂತ್ ಅಚ್ರೇಕರ್ ಅವರಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿನೋದ್ ಕಾಂಬ್ಳೆ ಕಾಣಿಸಿಕೊಂಡಿದ್ದಾರೆ. ಇವರ ಚಿಂತಾಜನಕ ಸ್ಥಿತಿಯನ್ನು ಕಂಡು ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಇವರ ಸಹಾಯಕ್ಕೆ ಮುಂದಾಗಿದ್ದರು. 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಕಪಿಲ್ ದೇವ್ ಸಹ ಇವರ ಸಹಾಯಕ್ಕೆ ಮುಂದಾಗಿದ್ದರು. ಅಭಿಮಾನಿಗಳು ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುವ ಭರವಸೆ ನೀಡಿದ್ದರು. ಸದ್ಯ ಇವರು ಠಾಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ವಿನೋದ್ ಕಾಬ್ಳೆ 1991ರಲ್ಲಿ ಪದಾರ್ಪಣೆ ಮಾಡಿದರು. ಎರಡು ವರ್ಷಗಳ ಬಳಿಕ ಕಾಂಬ್ಳೆ ಟೆಸ್ಟ್ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದರಿ. ಅಲ್ಲದೆ ಸಿಕ್ಕ ಅವಕಾಶದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಇವರು ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 1000 ರನ್ ಗಳಿಸಿದ ಬ್ಯಾಟರ್ ಎಂಬ ಹಿರಿಮೆ ಇವರು ಹೊಂದಿದ್ದಾರೆ.
ವಿನೋದ್ ಕಾಂಬ್ಳೆ ಹಾಗೂ ಸಚಿನ್ ತೆಂಡೂಲ್ಕರ್ ಬಾಲ್ಯದ ಸ್ನೇಹಿತರು. ಇಬ್ಬರು ಶಾಲಾ ಟೂರ್ನಿಯಲ್ಲಿ ಆಡುವಾಗ ಗರಿಷ್ಠ ರನ್ಗಳ ಜೊತೆಯಾಟದ ಕಾಣಿಕೆ ನೀಡಿ ದಾಖಲೆ ನಿರ್ಮಿಸಿದ್ದರು. ಇವರು ಭಾರತದ ಪರ 17 ಟೆಸ್ಟ್ ಪಂದ್ಯಗಳಲ್ಲಿ, 4 ಶತಕ, 3 ಅರ್ಧ ಶತಕ ಸೇರಿದಂತೆ ಒಟ್ಟು 1084 ರನ್ ಸಿಡಿಸಿದ್ದಾರೆ. ಇವರು 104 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಮಾಡಿ 2477 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 14 ಅರ್ಧಶತಗಳು ಸೇರಿವೆ. 2000ರ ಹೊಸ್ತಿಲಲ್ಲಿ ಇವರ ಪ್ರದರ್ಶನ ಕಳಪೆ ಆಗಿದ್ದರಿಂದ ಇವರನ್ನು ತಂಡದಿಂದ ಕೈ ಬಿಡಲಾಯಿತು. 2000 ರಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಪರ ಕೊನೆಯ ಏಕದಿನ ಪಂದ್ಯವನ್ನು ಕಾಂಬ್ಳೆ ಆಡಿದ್ದಾರೆ.