
ಮುಂಬೈ, ಜುಲೈ 2: ಸದಾ ವಿವಾದಗಳ ಕಾರಣದಿಂದ ಸುದ್ದಿಯಾಗುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ.
ಪತ್ನಿ ಆಂಡ್ರಿಯಾ ಜತೆ ಮುಂಬೈನ ಮಾಲ್ ಒಂದರಲ್ಲಿ ಭಾನುವಾರ ಕಾಂಬ್ಳಿ, ಬಾಲಿವುಡ್ನ ಮ್ಯೂಸಿಕ್ ಕಂಪೋಸರ್ ಅಂಕುರ್ ತಿವಾರಿ ಮತ್ತು ಅವರ ತಂದೆ ಜತೆ ಹೊಡೆದಾಡಿಕೊಂಡಿದ್ದಾರೆ.
ಮಲಾದ್ನಲ್ಲಿರುವ ಇನ್ ಆರ್ಬಿಟ್ ಮನಾಲ್ಗೆ ತೆರಳಿದ್ದಾಗ ಪತ್ನಿ ಆಂಡ್ರಿಯಾ ಜತೆ ಅಂಕುರ್ ತಿವಾರಿ ಅವರ ತಂದೆ ಆರ್ಕೆ ತಿವಾರಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಬ್ಳಿ ಮುಖಕ್ಕೆ ಗುದ್ದಿದ್ದಾರೆ ಎನ್ನಲಾಗಿದೆ.
ಆರ್ಕೆ ತಿವಾರಿ ಅವರು ಉದ್ದೇಶಪೂರ್ವಕವಾಗಿ ಆಂಡ್ರಿಯಾ ಅವರ ಕೈಗಳನ್ನು ಸ್ಪರ್ಶಿಸಿದ್ದರು. ಇದರಿಂದ ಕೋಪಗೊಂಡ ಕಾಂಬ್ಳಿ 59 ವರ್ಷದ ತಿವಾರಿ ಅವರಿಗೆ ಗುದ್ದಿದ್ದಾರೆ. ಬಳಿಕ ಆಂಡ್ರಿಯಾ ಕೂಡ ತಮ್ಮ ಚಪ್ಪಲಿ ತೆಗೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಬಂಗೂರ್ ನಗರ್ ಪೊಲೀಸರು ಈ ವಿಚಾರದ ಕುರಿತು ತನಿಖೆ ನಡೆಸಿದ್ದಾರೆ. ಆದರೆ, ಇದುವರೆಗೂ ಯಾರನ್ನೂ ಬಂಧಿಸಿಲ್ಲ.
ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮಾಲ್ನ ಗೇಮ್ ಝೋನ್ನಲ್ಲಿದ್ದೆವು. ಆಗ ಆ ವೃದ್ಧ ನನ್ನ ಪತ್ನಿಯ ಕೈ ಸ್ಪರ್ಶಿಸಿದರು. ಕೂಡಲೇ ಅವರನ್ನು ನನ್ನ ಪತ್ನಿ ಹಿಡಿದುಕೊಂಡಳು. ಆದರೆ ಆಕೆಯನ್ನು ಅವರು ದೂರತಳ್ಳಿದರು.
ಕೆಲವು ನಿಮಿಷಗಳ ಬಳಿಕ ನಾವು ಫುಡ್ ಕೋರ್ಟ್ನಲ್ಲಿದ್ದಾಗ ಇಬ್ಬರು ವ್ಯಕ್ತಿಗಳು ಬಂದರು. ಬಹುಶಃ ಅವರ ಮಕ್ಕಳಿರಬೇಕು. ನನ್ನ ಹೆಂಡತಿ ಮೇಲೆ ಹಲ್ಲೆ ಮಾಡಲು ಮುಂದಾದರು. ಅಲ್ಲಿಂದ ಸುಮ್ಮನೆ ಹೋಗುವಂತೆ ಹೇಳಿದಾಗ, ನಾವು ಯಾರು ಎಂದು ನಿನಗೆ ಗೊತ್ತಿಲ್ಲವೇ? ಎಂದು ದರ್ಪದಿಂದ ಕೇಳಿದರು ಎಂಬುದಾಗಿ ಕಾಂಬ್ಳಿ ಹೇಳಿದ್ದಾರೆ.
ಮಕ್ಕಳ ಜತೆ ಆಡುವಾಗ ಕೈ ಮುಟ್ಟುವ ಮೂಲಜ ತಿವಾರಿ ಅನುಚಿತವಾಗಿ ವರ್ತಿಸಿದರು. ಜನಜಂಗುಳಿ ನಡುವೆ ನನಗೆ ಅದು ತಿಳಿಯುವುದಿಲ್ಲ ಎಂದು ಭಾವಿಸಿದ್ದರು. ಆದರೆ, ರೆಡ್ಹ್ಯಾಂಡ್ ಆಗಿ ಅವರನ್ನು ಹಿಡಿದೆ. ಇದರಿಂದ ಅವರಿಗೆ ಮುಜುಗರವಾಯಿತು ಎಂದು ಆಂಡ್ರಿಯಾ ಹೇಳಿದ್ದಾರೆ.

ಆದರೆ, ಈ ಆರೋಪಗಳನ್ನು ಅಂಕುರ್ ತಿವಾರಿ ತಳ್ಳಿಹಾಕಿದ್ದಾರೆ. ಪೋಷಕರು, ಪತ್ನಿ ಮತ್ತು ಮಗಳೊಂದಿಗೆ ಮಾಲ್ನಲ್ಲಿದ್ದೆ. ಬ್ಯಾಂಕ್ನ ನಿವೃತ್ತ ಉದ್ಯೋಗಿಯಾಗಿರುವ ತಂದೆ, ವಿನೋದ್ ಕಾಂಬ್ಳಿ ಅವರನ್ನು ನೋಡಿದ್ದಾಗಿ ತಿಳಿಸಿದರು. ಮಹಿಳೆಯೊಬ್ಬರ ಮುಂದೆ ಹಾದು ಹೋಗುವಾಗ ಕಾಂಬ್ಳಿ ಬಂದು ಹಲ್ಲೆ ನಡೆಸಿದರು ಎಂದು ಅಂಕುರ್ ದೂರಿದ್ದಾರೆ.
ಹಲ್ಲೆಯ ಬಳಿಕ ನನ್ನ ತಂದೆ ಆಘಾತಕ್ಕೆ ಒಳಗಾಗಿದ್ದಾರೆ. ತಮಗೆ ಹೊಡೆಯಲಾಗಿದೆ ಎನ್ನುವುದನ್ನೂ ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಆ ಮಹಿಳೆ ಕಿರುಚಾಡುತ್ತಿದ್ದಳು. ಕೈಯನ್ನು ಸ್ಪರ್ಶಿಸಿದ್ದಾಗಿ ತಂದೆ ಮೇಲೆ ಆರೋಪಿಸುತ್ತಿದ್ದರು. ಆಕೆಯನ್ನು ಗುರುತಿಸುವಂತೆ ತಂದೆಯನ್ನು ಕೇಳಿದೆವು. ಕೊನೆಗೆ ಅದು ಕಾಂಬ್ಳಿ ಅವರ ಪತ್ನಿ ಎನ್ನುವುದು ಗೊತ್ತಾಯಿತು.
ಕಾಂಬ್ಳಿ ಮತ್ತು ಆಂಡ್ರಿಯಾ ಬಳಿ ಹೋಗಿ ನಿಮ್ಮ ಹತ್ತಿರ ಮಾತನಾಡಬೇಕೆಂದು ಹೇಳಿದೆ. ಆದರೆ ಅವರು ನನ್ನನ್ನು ತಳ್ಳಿ ಅವಾಚ್ಯವಾಗಿ ನಿಂದಿಸಿದರು. ಕಾಂಬ್ಳಿಯ ಪತ್ನಿ ಚಪ್ಪಲಿ ತೆಗೆದು ಅದರಿಂದ ಹೊಡೆಯುವುದಾಗಿ ಬೆದರಿಸಿದರು.
ಪೊಲೀಸರಿಗೆ ಕರೆ ಮಾಡಲು ಮುಂದಾದಾಗ ನನ್ನ ಫೋನ್ ಕಿತ್ತುಕೊಂಡರು. ಘಟನೆಯ ವಿಡಿಯೋ ಮಾಡಿದ್ದ ಮಹಿಳೆಯೊಬ್ಬರನ್ನು ಹಿಂಬಾಲಿಸಿ ಅದನ್ನು ಡಿಲೀಟ್ ಮಾಡಿಸಿದರು. ಸಂಜೆ 4.30ರ ವೇಳೆಗೆ ಬಂಗೂರ್ ನಗರ್ ಪೊಲೀಸರಿಗೆ ದೂರು ನೀಡಿದೆವು ಎಂದು ಅಂಕುರ್ ತಿಳಿಸಿದ್ದಾರೆ.
ಅಂಕುರ್ ತಿವಾರಿ ಅವರು ಬಾಲಿವುಡ್ನಬ ಜನಪ್ರಿಯ ಗಾಯಕ, ಸಂಗೀತ ನಿರ್ದೇಶಕ ಅಂಕಿತ್ ತಿವಾರಿ ಅವರ ಸಹೋದರ.