
ನಾಯಕತ್ವ ನಿರ್ವಹಿಸಿದವರು ಸ್ಥಾನ ಕಳೆದುಕೊಂಡ ನಂತರವೂ ಅದೇ ರೀತಿ ವರ್ತಿಸುತ್ತಾರೆ
ನೀವು ಟೀಮ್ ಇಂಡಿಯಾವನ್ನು ಹಲವಾರು ವರ್ಷಗಳ ಕಾಲ ನಾಯಕನಾಗಿ ಮುನ್ನಡೆಸಿ, ತಂಡದ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿ ನಂತರ ನಾಯಕತ್ವ ಕಳೆದುಕೊಂಡು ಮತ್ತೆ ಮೈದಾನಕ್ಕಿಳಿದರೆ ಈ ಹಿಂದೆ ನೀವು ನಾಯಕನಾಗಿ ಹೇಗೆ ನಡೆದುಕೊಂಡಿದ್ದೆರೋ ಅದೇ ರೀತಿ ಈ ಸಂದರ್ಭದಲ್ಲಿಯೂ ಕೂಡ ನಡೆದುಕೊಳ್ಳುತ್ತೀರ ಎಂದು ಅಜಯ್ ಜಡೇಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವ ಪಡೆದುಕೊಂಡ ಬ್ಯಾಕ್ ಬೆಂಚರ್ ಅಲ್ಲ, ಆತ ನಾಯಕನಾಗಿ ಆಯ್ಕೆಯಾಗುವುದಕ್ಕೂ ಮುನ್ನವೇ ತಂಡವನ್ನು ಮುನ್ನೆಡೆಸುವ ಲಕ್ಷಣವನ್ನು ಹೊಂದಿದ್ದಂತಹ ಆಟಗಾರನಾಗಿದ್ದರು ಎಂದು ಅಜಯ್ ಜಡೇಜಾ ಹೊಗಳಿದ್ದಾರೆ. 2011 ವಿಶ್ವಕಪ್ ಗೆಲುವಿನ ನಂತರ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲಿನ ಮೇಲೆ ಹೊತ್ತುಕೊಳ್ಳಲು ವಿರಾಟ್ ಕೊಹ್ಲಿ ಅವರಿಗೆ ಯಾರೂ ಹೇಳಲಿಲ್ಲ ಬದಲಾಗಿ ಅವರೇ ಮುಂದಾಲೋಚನೆಯನ್ನು ನಡೆಸಿ ಎತ್ತಿಕೊಂಡರು ಎಂದು ಇದೇ ಸಮಯದಲ್ಲಿ ಅಜಯ್ ಜಡೇಜಾ ಹೇಳಿದ್ದಾರೆ.

ಕೊಹ್ಲಿ ನಾಯಕನಲ್ಲ ಎಂದು ಈ ಐವರು ಹೇಳಬೇಕು ಅಷ್ಟೇ
ವಿರಾಟ್ ಕೊಹ್ಲಿ ಯಾವಾಗಲೂ ನಾಯಕನೇ ಎಂದು ಹೇಳಿಕೆ ನೀಡಿರುವ ಅಜಯ್ ಜಡೇಜಾ ಕೊಹ್ಲಿಯ ಶಕ್ತಿ ಮತ್ತು ಮನಸ್ಥಿತಿಗಳು ಆತನನ್ನು ನಾಯಕ ಸ್ಥಾನಕ್ಕೇರುವಂತೆ ಮಾಡಿದವು ಹಾಗೂ ಆತ ನಾಯಕನಲ್ಲ ಎಂದು ಇತ್ತೀಚೆಗಷ್ಟೇ ಇತರರಿಂದ ಆಯ್ಕೆಯಾದ ಐವರು ಭಾವಿಸಿಕೊಳ್ಳಬೇಕಷ್ಟೇ ಎಂದು ಹೇಳಿಕೆ ನೀಡಿದ್ದಾರೆ. ಆಟಗಾರರು ಮತ್ತು ಆಯ್ಕೆಗಾರರು ಇಂದು ಬರುತ್ತಾರೆ ನಾಳೆ ಹೋಗುತ್ತಾರೆ, ಆದರೆ ಲೀಡರ್ ಯಾವತ್ತಿದ್ದರೂ ಒಬ್ಬನೇ ಎಂದ ಅಜಯ್ ಜಡೇಜಾ ಕೊಹ್ಲಿ ನಾಯಕನಲ್ಲ ಎನ್ನುವವರಿಗೆ ಟಾಂಗ್ ನೀಡಿದ್ದಾರೆ.

ಡಿಆರ್ಎಸ್ ಆಯ್ಕೆ ಮಾಡಿಕೊಳ್ಳಲೆಂದು ರೋಹಿತ್ ಶರ್ಮಾಗೆ ಸಲಹೆ ನೀಡಿದ್ದ ಕೊಹ್ಲಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಏಕದಿನ ಪಂದ್ಯದ 21ನೇ ಓವರ್ ಬೌಲಿಂಗ್ ಮಾಡಿದ ಯುಜ್ವೇಂದ್ರ ಚಹಲ್ ಎಸೆತವನ್ನು ಬಾರಿಸಲು ಹೋದ ಬ್ರೂಕ್ಸ್ ಯಶಸ್ವಿಯಾಗಲಿಲ್ಲ. ಈ ಸಂದರ್ಭದಲ್ಲಿ ಬ್ಯಾಟ್ ತಾಕಿದ್ದ ಬಾಲ್ ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಆದರೆ ಅಂಪೈರ್ ಇದಕ್ಕೆ ನಾಟ್ಔಟ್ ಎಂದು ತೀರ್ಪನ್ನು ನೀಡಿದ್ದರು. ಈ ಸಂದರ್ಭದಲ್ಲಿ ಯುಜ್ವೇಂದ್ರ ಚಹಲ್ ನಾಯಕ ರೋಹಿತ್ ಶರ್ಮಾಗೆ ಡಿಆರ್ಎಸ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿರಾಟ್ ಕೊಹ್ಲಿ ಡಿಆರ್ಎಸ್ ತೆಗೆದುಕೊಳ್ಳುವಂತೆ ರೋಹಿತ್ ಶರ್ಮಾಗೆ ಸಲಹೆ ನೀಡಿದರು ಮತ್ತು ಇದರಂತೆ ಡಿಆರ್ಎಸ್ ಮೊರೆ ಹೋದ ಟೀಮ್ ಇಂಡಿಯಾಗೆ ಮುನ್ನಡೆ ದೊರೆಯಿತು. ಹೀಗೆ ವಿರಾಟ್ ಕೊಹ್ಲಿ ಮೈದಾನದಲ್ಲಿ ರೋಹಿತ್ ಶರ್ಮಾಗೆ ಸಲಹೆಗಳನ್ನು ನೀಡುತ್ತಾ ಈಗಲೂ ಪರೋಕ್ಷವಾಗಿ ನಾಯಕನಾಗಿಯೇ ತಂಡದಲ್ಲಿ ಉಳಿದುಕೊಂಡಿದ್ದಾರೆ ಎಂದು ಹಲವಾರು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications












