
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಈ ಗೆಲುವಿನಿಂದಿಗೆ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ವಶಕ್ಕೆ ಪಡೆದುಕೊಂಡಂತಾಗಿದೆ. ಈ ಪಂದ್ಯದ ಮುಕ್ತಾಯದ ಬಳಿಕ ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಲೇಸರ್ ಶೋ ಅಭಿಮಾನಿಗಳನ್ನು ರಂಜಿಸಿತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಇಶಾನ್ ಕಿಶನ್ ನೃತ್ಯ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಮೈದಾನದ ಆಚೆ ಅವಕಾಶ ಸಿಕ್ಕಾಗೆಲ್ಲಾ ಡ್ಯಾನ್ಸ್ ಮೂಲಕ ಆನಂದಿಸಿರುವುದು ಅಭಿಮಾನಿಗಳಿಗೆ ಹೊಸತಲ್ಲ. ಇನ್ನು ಇಶಾನ್ ಕಿಶನ್ ಕೂಡ ಕೆಲ ಸಂದರ್ಭಗಳಲ್ಲಿ ಕುಣಿದು ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ ಕೊಹ್ಲಿ ಹಾಗೂ ಇಶಾನ್ ಇಬ್ಬರು ಕೂಡ ಈಡನ್ ಗಾರ್ಡನ್ನಲ್ಲಿ ಮಾಡಿರುವ ಈ ಡ್ಯಾನ್ಸ್ ಸ್ಟೆಪ್ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕೂಡ ಕುಣಿಸುವಂತೆ ಮಾಡಿತ್ತು.
ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಪ್ರದರ್ಶನ ಅದ್ಭುತವಾಗಿತ್ತು. ಆದರೆ ಬ್ಯಾಟಿಂಗ್ನಲ್ಲಿ ಅಗ್ರ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸಿದ ಕಾರಣ ಸಂಕಷ್ಟಕ್ಕೆ ಸಿಲುಕಿತ್ತು. ಈ ಲೋಸ್ಕೋರಿಂಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿ ಸೋಲಿನ ಭೀತಿಗೆ ಒಳಗಾಗಿದ್ದರು ಕೂಡ ಕೆಎಲ್ ರಾಹುಲ್ ಜವಾಬ್ಧಾರಿಯುತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಸರಣಿಯಲ್ಲಿ ಒಂದು ಪಂದ್ಯ ಬಾಕಿಯಿರುವಂತೆಯೇ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವಿರುದ್ಧ ಭಾರತ ಬೌಲಿಂಗ್ ವಿಭಾಗ ಅದ್ಭುತ ಯಶಸ್ಸು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಶ್ರೀಲಂಕಾ ತಂಡವನ್ನು 215 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಭಾರತೀಯ ಬೌಲಿಂಗ್ ವಿಭಾಗ ಯಶಸ್ವಿಯಾಗಿತ್ತು. ಆದರೆ ಬ್ಯಾಟಿಂಗ್ನಲ್ಲಿ ಭಾರತದ ದಾಂಡಿಗರು ಕೂಡ ಹಿನ್ನಡೆ ಅನುಭವಿಸಿದರು. ಒಂದು ಹಂತದಲ್ಲಿ ಲಂಕಾ ಬೌಲರ್ಗಳು ಭಾರತದ ಬ್ಯಾಟಿಂಗ್ ವಿಭಾಗದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸುವ ಹಿಮ್ಮಸ್ಸಿನಲ್ಲಿದ್ದರು. ಆದರೆ ಕನ್ನಡಿಗ ಕೆಎಲ್ ರಾಹುಲ್ ಅಂತಿಮ ಹಂತದವರೆಗೂ ಅಜೇಯವಾಗುಳಿದು ಭಾರತ ತಂಡಕ್ಕೆ ಗೆಲುವು ಖಚಿತಪಡಿಸಿದರು. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಪರವಾಗಿ ಕುಲ್ದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದರು. ಕುಲ್ದೀಪ್ ಯಾದವ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್ ಪಡೆದು ಶ್ರೀಲಂಕಾ ಬ್ಯಾಟಿಂಗ್ ವಿಭಾಗಕ್ಕೆ ಕಾಡಿದರು. ಬ್ಯಾಟಿಂಗ್ನಲ್ಲಿ ರಾಹುಲ್ ಜೊತೆಗೆ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ನೀಡಿದ ಜೊತೆಯಾದ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತು.
ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ಜನವರಿ 15 ಭಾನುವಾರ ನಡೆಯಲಿದೆ. ತಿರುವನಂತಪುರಂನ ಗ್ರೀನ್ಫೀಲ್ಡ್ ಇಂಟರ್ನ್ಯಾಶನಲ್ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಿಕೊಳ್ಳಲಿದ್ದು ಭಾರತ ಸರಣಿ ವೈಟ್ವಾಶ್ ಮಾಡುವ ವಿಶ್ವಾಸದಲ್ಲಿದೆ.
ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಇಶನ್ ಸಿಂಗ್ ಕಿಶನ್, ಅರ್ಷದೀಪ್ , ಯುಜ್ವೇಂದ್ರ ಚಾಹಲ್
ಶ್ರೀಲಂಕಾ ಸ್ಕ್ವಾಡ್: ನುವಾನಿಡು ಫೆರ್ನಾಂಡೋ, ಅವಿಷ್ಕಾ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಗೆ, ಲಹಿರು ಕುಮಾರ, ಕಸುನ್ ರಜಿತ, ಮಹೇಶ್ ತೀಕ್ಷಣ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ಜೆಫ್ರಿ ವಂಡರ್ಸೆ, ಸದೀರ ಸಮರವಿಕ್ರಮ, ಪಾತುಮ್ ನಿಸ್ಸಾಂಕ, ದಿಲ್ಶಾನ್ ಮಧುಶಂಕ