ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಪರಿಣಾಮ ಒಂದು ದಶಕಗಳ ಕಾಲ ಪಾರಮ್ಯ ಸಾಧಿಸಿದ್ದ ಟ್ರೋಫಿಯನ್ನು ಎದುರಾಳಿಗೆ ಬಿಟ್ಟು ಕೊಡಬೇಕಾಯಿತು. ಈ ವೇಳೆ ವಿರಾಟ್ ಕೊಹ್ಲಿ ಅವರ ಆಟದ ಮೇಲೆ ಹಲವು ಟೀಕೆಗಳು ಕೇಳಿ ಬಂದಿವೆ. ಇವರು ಆಸ್ಟ್ರೇಲಿಯಾ ಪ್ರವಾಸದ ಬಳಿಕ ಬಿಸಿಸಿಐ ರಿವ್ಯೂವ್ ಮಿಟಿಂಗ್ ಭಾಗವಾಗಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಫಾರ್ಮ್ ಕಂಡುಕೊಳ್ಳುವಂತೆ ವಿರಾಟ್ಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಬಾರ್ಡರ್ ಗಾವಾಸ್ಕರ್ ಸರಣಿಯ ಮೊದಲ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ವಿರಾಟ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು. ಆದರೆ ಉಳಿದ ನಾಲ್ಕು ಪಂದ್ಯಗಳಲ್ಲಿ ರನ್ ಬರವನ್ನು ಅನುಭವಿಸಿದ್ದರು. ಇವರು ಆಡಿದ 5 ಪಂದ್ಯಗಳಲ್ಲಿ ಕೇವಲ 190 ರನ್ ಸಿಡಿಸಿದ್ದಾರೆ. ಹೀಗಾಗಿ ಇವರು ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ಬಿಸಿಸಿಐ ತಮ್ಮ ಸ್ಟಾರ್ ಆಟಗಾರರಿಗೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ನೀಡುವಷ್ಟೇ ಮಹತ್ವವನ್ನು ದೇಶೀಯ ಟೂರ್ನಿಗಳಿಗೂ ನೀಡಬೇಕು ಎಂದು ಸೂಚಿಸಿದೆ.

ಬಿಸಿಸಿಐ ಖಡಕ್ ಸೂಚನೆ ನೀಡಿದ ಮೇಲೆ ವಿರಾಟ್ ಕೊಹ್ಲಿ, ಹರ್ಷಿತ್ ರಾಣಾ, ರಿಷಭ್ ಪಂತ್ ಅವರನ್ನು ಡೆಲ್ಲಿ ರಣಜಿ ತಂಡದ ಸಂಭಾವ್ಯ ತಂಡದಲ್ಲಿ ಸೇರಿಸಲಾಗಿದೆ. ಈ ಆಟಗಾರರು ಜನವರಿ 23 ರಿಂದ ಪ್ರಾರಂಭವಾಗುವ ಮುಂದಿನ ಸುತ್ತಿನ ರಣಜಿ ಟ್ರೋಫಿ ಪಂದ್ಯಗಳಿಗೆ ಅವರು ತಮ್ಮನ್ನು ತಾವು ಲಭ್ಯವಾಗುವಂತೆ ಮಾಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ದೆಹಲಿ ತಂಡ "ಡಿ" ಗುಂಪಿನಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡುವ ಅವಕಾಶವನ್ನು ಹೊಂದಿದೆ. ಜನವರಿ 23 ರಂದು ಸೌರಾಷ್ಟ್ರ ವಿರುದ್ಧ ಮೊದಲ ಪಂದ್ಯ ನಡೆದರೆ, ಎರಡನೇ ಪಂದ್ಯ ರೈಲ್ವೇಸ್ ವಿರುದ್ಧ ಜನವರಿ 30 ರಂದು ನಡೆಯಲಿದೆ. ಈ ಸೂಪರ್ ಸ್ಟಾರ್ ಆಟಗಾರರು ತಮ್ಮ ತಮ್ಮ ರಾಜ್ಯದ ಪರವಾಗಿ ಆಡಿದರೆ ತಂಡಕ್ಕೆ ನೆರವಾಗಬಲ್ಲರು. ಈಗಾಗಲೇ ಡೆಲ್ಲಿ ಆಡಿದ 5 ಪಂದ್ಯಗಳಲ್ಲಿ 1 ಗೆಲುವು, 1 ಸೋಲು, 3 ಡ್ರಾ ಸಾಧಿಸಿದ್ದು, 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಳಿದ ಎರಡೂ ಪಂದ್ಯಗಳಲ್ಲಿ ಡೆಲ್ಲಿ ಗೆದ್ದಲ್ಲಿ ನಾಕೌಟ್ ಹಂತದ ಕನಸು ಕಾಣಬಹುದು.

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈಗ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಕಾರಣಕ್ಕೆ ಈ ಎಲ್ಲ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಕೊಹ್ಲಿ ಅಂದುಕೊಂಡತೆ ನಡೆದಿದ್ದರೆ ಈಗ ಲಂಡನ್ನಲ್ಲಿ ಕುಟುಂಬದ ಜೊತೆ ಮೋಜಿನಲ್ಲಿರುತ್ತಿದ್ದರು. ವಿರಾಟ್ 2012ರಲ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿಯ ಪಂದ್ಯಗಳನ್ನು ಆಡಿದ್ದರು. ಆ ವರ್ಷವೂ ವಿರಾಟ್ ಕೇವಲ ಒಂದೇ ಒಂದು ರಣಜಿ ಪಂದ್ಯವನ್ನು ಆಡಿದ್ದು ಎರಡೂ ಇನಿಂಗ್ಸ್ ಸೇರಿಸಿ 57 ರನ್ ಸಿಡಿಸಿದ್ದಾರೆ. ಈ ಬಾರಿ ಅವರು ಅಂಗಳಕ್ಕೆ ಇಳಿದರೆ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇನ್ನು ಪಂತ್ 2017 ಹಾಗೂ 18ರಲ್ಲಿ ರಣಜಿ ಟ್ರೋಫಿಯನ್ನು ಆಡಿದ್ದರು. ಈ ಸ್ಟಾರ್ ಆಟಗಾರರನ್ನು ದೆಹಲಿ ಸಂಭಾವ್ಯ ಪಟ್ಟಿಯಲ್ಲಿ ಸೇರಿಸುವುದು ಸಾಮಾನ್ಯ. ಆದರೆ ಅಂತಿಮ ತಂಡದಲ್ಲಿ ಅವರ ಸೇರ್ಪಡೆ ಆಗುತ್ತಾರಾ ಎಂಬುದು ಆಟಗಾರರ ನಿರ್ಧಾರವಾಗಲಿದೆ.