ಮುಂಬೈ, ಡಿಸೆಂಬರ್ 15: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಅವರ ಆರತಕ್ಷತೆ ಕಾರ್ಯಕ್ರಮ ಮುಂಬೈನಲ್ಲಿ ನವದೆಹಲಿ ಹಾಗೂ ಮುಂಬೈನಲ್ಲಿ ನಡೆಯಲಿದೆ. ಇದಕ್ಕಾಗಿ ವಿರುಷ್ಕಾ ಕಳಿಸಿರುವ ಆರತಕ್ಷತೆ ಆಹ್ವಾನ ಪತ್ರಿಕೆ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ.
ಇಟಲಿಯಲ್ಲಿ ಅದ್ಧೂರಿ ಮದುವೆ ಮುಗಿಸಿಕೊಂಡು ಅನುಷ್ಕಾ ಶರ್ಮಾ ಕುಟುಂಬ ಮುಂಬೈಗೆ ಮರಳಿದೆ. ತಂದೆ ಅಜಯ್ ಕುಮಾರ್ ಶರ್ಮಾ, ತಾಯಿ ಆಶಿಮಾ ಶರ್ಮಾ ಹಾಗೂ ಸಹೋದರ ಕರ್ಣೇಶ್ ಶರ್ಮಾ ಮುಂಬೈಗೆ ಬಂದಿಳಿದಿದ್ದಾರೆ.

ಡಿಸೆಂಬರ್ 21ರಂದು ದೆಹಲಿಯ ತಾಜ್ ಡಿಪ್ಲೊಮೆಟಿಕ್ ಎನ್ ಕ್ಲೇವ್ ನಲ್ಲಿ ನಡೆಯಲಿರುವ ಅನುಷ್ಕಾ-ವಿರಾಟ್ ಆರತಕ್ಷತೆಗಾಗಿ ಸಿದ್ಧತೆ ಮಾಡಿಕೊಳ್ತಿದ್ದಾರೆ.
ಡಿಸೆಂಬರ್ 26ರಂದು ಮುಂಬೈನಲ್ಲಿ ನಡೆಯಲಿರುವ ರಿಸೆಪ್ಷನ್ ನ ಆಹ್ವಾನ ಪತ್ರಿಕೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಆಹ್ವಾನ ಪತ್ರಿಕೆಯನ್ನು ನಿರ್ದೇಶಕ ಮಹೇಶ್ ಭಟ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕರೆಯೋಲೆಯಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಪರಿಸರ ಕಾಳಜಿ ಮೆರೆದಿರೋದು ವಿಶೇಷ. ಆಹ್ವಾನ ಪತ್ರಿಕೆಯಲ್ಲಿ ಪುಟ್ಟದೊಂದು ಗಿಡವನ್ನು ಇಡಲಾಗಿದೆ.
ಪ್ರತಿಯೊಬ್ಬರೂ ಗಿಡ ನೆಟ್ಟು, ಪರಿಸರವನ್ನು ಕಾಪಾಡಬೇಕು ಅನ್ನೋ ಸಂದೇಶವನ್ನು ವಿರುಷ್ಕಾ ನೀಡಿದ್ದಾರೆ. ಇತ್ತೀಚೆಗೆ ಶ್ರೀಲಂಕಾಕ್ಕೆ ತೆರಳಿದ್ದ ಕೊಹ್ಲಿ ಹಾಗೂ ಅನುಷ್ಕಾ ಅಲ್ಲಿ ಜೊತೆಯಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.