
ಮುಂಬೈ, ಮಾರ್ಚ್ 30: ಟೀಮ್ ಇಂಡಿಯಾದ ನಾಯಕ ವಿರಾಟ್ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಪ್ರಧಾನ ಮಂತ್ರಿ ಮತ್ತು ಮಹಾರಾಷ್ಟ್ರ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ಬೆಂಬಲ ನೀಡುವ ಪ್ರತಿಜ್ಞೆ ಮಾಡಿದ್ದಾರೆ. ಕೊರೊನಾವೈರಸ್ ವಿರುದ್ಧದ ಹೋರಾಟಕ್ಕಾಗಿ ನಾವು ಪ್ರಧಾನಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೆಂಬಲ ನೀಡುವುದಾಗಿ ಕೊಹ್ಲಿ-ಅನುಷ್ಕಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದೆ.
'ಅನುಷ್ಕಾ ಮತ್ತು ನಾನು ಪಿಎಂ ಕೇರ್ಸ್ ಮತ್ತು ಚೀಫ್ ಮಿನಿಸ್ಟರ್ ರಿಲೀಫ್ ಫಂಡ್ (ಮಹಾರಾಷ್ಟ್ರ)ಗೆ ನಮ್ಮ ಬೆಂಬಲದ ಪ್ರತಿಜ್ಞೆ ಮಾಡುತ್ತಿದ್ದೇವೆ. ಬಹಳಷ್ಟು ಮಂದಿ ಕಷ್ಟ ಅನುಭವಿಸುತ್ತಿರುವುದನ್ನು ನೋಡುವಾಗ ನಮ್ಮ ಹೃದಯ ಹಿಂಡಿದಂತಾಗುತ್ತಿದೆ. ನಮ್ಮ ಸಹಾಯ ಯಾವುದಾದರೊಂದು ರೀತಿಯಲ್ಲಿ ಅವರ ಕಣ್ಣೀರು ಒರೆಸಬಹುದು' ಎಂದು ವಿರಾಟ್ ಕೊಹ್ಲಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ಗೆ ಕುರಿತಂತೆ ಮೌಲ್ಯಯುತ ಸಂದೇಶಗಳನ್ನು ಸಾರಲು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಹಳಷ್ಟು ಬಾರಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದರು. ಮನೆಯಲ್ಲೇ ಇದ್ದು ಸೋಂಕಿನಿಂದ ರಕ್ಷಿಸಿಕೊಳ್ಳಿ ಎಂದು ಕೋರಿಕೊಂಡಿದ್ದರು. ಕೊಹ್ಲಿ-ಅನುಷ್ಕಾ ದಂಪತಿ ಈ ಬಾರಿ ಎಷ್ಟು ಮೌಲ್ಯದ ದೇಣಿಗೆ ನೀಡುತ್ತಿದೆ ಎಂದು ಎಲ್ಲೂ ತಿಳಿಸಿಲ್ಲ, ಬದಲಿಗೆ ಸಹಾಯ ನೀಡುತ್ತಿದ್ದೇವೆ ಎಂದಷ್ಟೇ ಹೇಳಿದೆ.
ಕ್ರೀಡಾರಂಗದ ಅನೇಕ ತಾರೆಯರು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ನೆರವು ನೀಡಿದ್ದರು. ಸುರೇಶ್ ರೈನಾ 52 ಲಕ್ಷ, ಅಜಿಂಕ್ಯ ರಹಾನೆ 10 ಲಕ್ಷ, ಬಿಸಿಸಿಐ 51 ಕೋಟಿ, ಸೌರವ್ ಗಂಗೂಲಿ ಅಕ್ಕಿ ದಾನ, ಸಚಿನ್ 25 ಲಕ್ಷ, ಪಿವಿ ಸಿಂಧು 10 ಲಕ್ಷ ರೂ ನೆರವು ನೀಡಿದ್ದರು.