
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ವಿರಾಟ್ ಕೊಹ್ಲಿ ಲಾಕ್ಡೌನ್ಗೆ ಜನರು ಸ್ಪಂದಿಸದೆ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಮನವಿ ಮಾಡಿಕೊಂಡಿದ್ದಾರೆ.
ದಯವಿಟ್ಟು ಎಲ್ಲರೂ ಎದ್ದೇಳಿ. ಪರಿಸ್ಥಿತಿಯ ನೈಜತೆ ಮತ್ತು ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಿ. ಇಂತಾ ಸಂದರ್ಭದಲ್ಲಿ ದೇಶ ನಮ್ಮ ಬೆಂಬಲ ಮತ್ತು ಪ್ರಾಮಾಣಿಕತೆಯನ್ನು ಬಯಸುತ್ತಿದೆ ಎಂದು ಬರೆದು ವಿಡಿಯೋವನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ.
ನಾನು ಭಾರತ ತಂಡದ ಕ್ರಿಕೆಟಿಗನಾಗಿ ಮಾತನಾಡುತ್ತಿಲ್ಲ. ನಾನು ಮಾತನಾಡುತ್ತಿರುವುದು ಭಾರತದ ನಾಗರೀಕನಾಗಿ. ಕೆಲ ದಿನಗಳಿಂದ ಜನರು ಗುಂಪಾಗಿ ಓಡಾಡುತ್ತಿರುವುದು, ಲಾಕ್ಡೌನ್ ನಿರ್ಭಂಧಗಳನ್ನು ಉಲ್ಲಂಘಿಸುತ್ತಿರುವುದು ಗಮನಿಸುತ್ತಿದ್ದೇನೆ. ಇದು ಈ ಹೋರಾಟವನ್ನು ನಾವು ಗಂಭೀರವಾಗಿ ಪರಿಗಣಿಸಿದಂತೆ ತೋರಿಸುತ್ತಿಲ್ಲ. ಆದರೆ ನಾವು ಮಾಡಬೇಕಾದ ಹೋರಾಟ ಅಷ್ಟು ಸುಲಭವಾಗಿರುವಂತದ್ದಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ವಿರಾಟ್ ಕೊಹ್ಲಿ ನಾನು ಪ್ರತಿಯೊಬ್ಬರಲ್ಲೂ ಮನವಿಯನ್ನು ಮಾಡಿಕೊಳ್ಳುತ್ತೇನೆ, ಎಲ್ಲರೂ ಸಾಮಾಜಿಕ ಅಅಮತರವನ್ನು ಕಾಯ್ದುಕೊಳ್ಳಿ. ಜೊತೆಗೆ ಸರ್ಕಾರ ನಾಗರಕರಿಗೆ ನೀಡಿರುವ ನಿರ್ದೇಶನಗಳನ್ನು ತಪ್ಪದೆ ಪಾಲಿಸಿ. ನಿಮ್ಮ ನಿರ್ಲಕ್ಷ್ಯ ಇನ್ಯಾರದ್ದೋ ಕುಟುಂಬಕ್ಕೆ ಅಪಾಯ ತರಬಾರದು ಎಂದಿದ್ದಾರೆ.
ಈ ರೀತಿ ನಿರ್ದೇಶನಗಳನ್ನು ಪಾಲಿಸದೇ ಇರುವುದು ನನ್ನ ಪ್ರಕಾರ ದೇಶದ ವಿರುದ್ಧ ನಡೆದುಕೊಂಡಂತೆ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದೇನೆ. ಸರ್ಕಾರದ ನಿರ್ದೇಶನಗಳನ್ನು ಪಾಲಿಸೋಣ ಎಂದು ವಿರಾಟ್ ಕೊಹ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.