
ಟೀಮ್ ಇಂಡಿಯಾದ ಸೀಮಿತ ಓವರ್ಗಳ ನಾಯಕತ್ವ ರೋಹಿತ್ ಶರ್ಮಾ ಹೆಗಲೇರಿದೆ. ಟಿ20 ಬಳಿಕ ಏಕದಿನ ನಾಯಕತ್ವ ಕೂಡ ವಿರಾಟ್ ಕೊಹ್ಲಿ ಕೈ ತಪ್ಪಿದೆ. ಈ ಬೆಳವಣಿಗೆ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದೆ. ಅನೇಕ ಮಾಜಿ ಆಟಗಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ಕೂಡ ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ಏಕದಿನ ಹಾಗೂ ಟಿ20 ನಾಯಕತ್ವದಿಂದ ಕೆಳಕ್ಕಿಳಿದ ಬಳಿಕ ವಿರಾಟ್ ಕೊಹ್ಲಿ ಮತ್ತಷ್ಟು ಅಪಾಯಕಾರಿ ಆಟಗಾರನಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಅಷ್ಟೇನೂ ಉತ್ತಮವಾಗಿಲ್ಲ. ಕೊಹ್ಲಿ ಬ್ಯಾಟ್ನಿಂದ ಶತಕ ಸಿಡಿಯದೆ ಅದಾಗಲೇ ಎರಡು ವರ್ಷವಾಗಿದೆ. 2019ರ ಬಳಿಕ ಕೊಹ್ಲಿ ಶತಕ ಸಿಡಿಸಿಲ್ಲ.ಹಾಗಿದ್ದರು ಕೂಡ ವಿರಾಟ್ ಕೊಹ್ಲಿ ತಮ್ಮ 33ನೇ ವಯಸ್ಸಿನಲ್ಲಿ ಅತ್ಯಂತ ಫಿಟ್ ಆಟಗಾರ ಎನಿಸಿಕೊಂಡಿದ್ದಾರೆ. ತಮ್ಮ ಆಟದಲ್ಲಿ ಪ್ರಗತಿಯನ್ನು ಸಾಧಿಸುವ ಸಲುವಾಗಿ ಸಾಕಷ್ಟು ಪ್ರಯತ್ನಗಳನ್ನು ಕೊಹ್ಲಿ ನಡೆಸುತ್ತಲೇ ಇದ್ದಾರೆ.
ಸ್ಟಾರ್ಸ್ಪೋರ್ಟ್ಸ್ನ ಸಂವಾದದಲ್ಲಿ ಭಾಗಿಯಾಗಿದ್ದ ಗೌತಮ್ ಗಂಭೀರ್ ಈ ಬಗ್ಗೆ ಮಾತನಾಡಿದ್ದಾರೆ. "ರೆಡ್ ಬಾಲ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಅವರ ಪಾತ್ರದಂತೆ ವಿರಾಟ್ ಕೊಹ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಕೇವಲ ನಾಯಕತ್ವದ ಹೊಣೆ ಮಾತ್ರವೇ ಇರುವುದಿಲ್ಲ. ಇದರಿಂದಾಗಿ ವಿರಾಟ್ ಕೊಹ್ಲಿ ಮತ್ತಷ್ಟು ಹೆಚ್ಚು ನಿರಾಳರಾಗಲಿದ್ದಾರೆ. ಈಗ ವಿರಾಟ್ ಕೊಹ್ಲಿ ಹೆಗಲ ಮೇಲೆ ನಾಯಕತ್ವದ ಒತ್ತಡ ಇಲ್ಲದಿರುವ ಕಾರಣದಿಂದಾಗಿ ಮತ್ತಷ್ಟು ಅಪಾಯಕಾರಿಯಾಗುವ ಸಾಧ್ಯತೆಯಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.
ವಿರಾಟ್ ಕೊಹ್ಲಿ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ ಗೌತಮ್ ಗಂಭೀರ್ ಕೊಹ್ಲಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಲಿದ್ದಾರೆ ಎಂದಿದ್ದಾರೆ. "ಖಂಡಿತಾ ವಿರಾಟ್ ಕೊಹ್ಲಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಲಿದ್ದಾರೆ. ವೈಟ್ ಬಾಲ್ ಕ್ರಿಕೆಟ್ ಆಗಿರಬಹುದು ಅಥವಾ ರೆಡ್ ಬಾಲ್ ಕ್ರಿಕೆಟ್ನಲ್ಲಿ ಆಗಿರಬಹುದು ಮತ್ತಷ್ಟು ಹೆಚ್ಚಿನ ರನ್ಗಳಿಸಲಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪ್ರತ್ಯೇಕ ನಾಯಕರು ತಂಡಕ್ಕೆ ತಮ್ಮದೇ ಆಗ ಯೋಜನೆ, ಗುರಿಯನ್ನು ನೀಡಲಿದ್ದಾರೆ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸೀಮಿತ ಓವರ್ಗಳ ನಾಯಕತ್ವದಿಂದ ಕೆಳಗಿಳಿದರೂ ವಿರಾಟ್ ಕೊಹ್ಲಿ ಆಟದಲ್ಲಿ ಹೊಂದಿರುವ ಆಕ್ರಮಣಕಾರಿ ಮನೋಭಾವವನ್ನು ಕಡಿಮೆಗೊಳಿಸಲಾರರು ಎಂದಿದ್ದಾರೆ. "ವಿರಾಟ್ ಕೊಹ್ಲಿಯವರ ಅತ್ಯುತ್ತಮ ಆಟವನ್ನು ಮುಂದೆಯೂ ನೋಡಲಿದ್ದೀರಿ ಎಂಬ ಭರವಸೆ ನನಗಿದೆ. ಅದು ರೆಡ್ ಬಾಲ್ ಕ್ರಿಕೆಟ್ ಆಗಿರಬಹುದು ಅಥವಾ ವೈಟ್ ಬಾಲ್ ಕ್ರಿಕೆಟ್ ಆಗಿರಬಹುದು. ಸುದೀರ್ಘ ಕಾಲದಿಂದ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಯಾವ ರೀತಿಯ ಸಾಮರ್ಥ್ಯವನ್ನು ವ್ಯಕ್ತಪಡಿಸಿದ್ದರೋ ಅದೇ ವಿರಾಟ್ ಕೊಹ್ಲಿಯನ್ನು ಮುಂದೆಯೂ ನೋಡಲಿದ್ದೀರಿ" ಎಂದು ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.
ದಕ್ಷಿಣ ಆಫ್ರಿಕಾಗೆ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು ಇಂದು(ಭಾನುವಾರ) ತಂಡದ ಸದಸ್ಯರು ಬಯೋಬಬಲ್ಗೆ ಸೇರಿಕೊಳ್ಳಲಿದ್ದಾರೆ. 16ನೇ ತಾರೀಕಿನಂದು ಆಟಗಾರರು ಮುಂಬೈನಿಂದ ಜೊಹನ್ಸ್ಬರ್ಗ್ಗೆ ಪ್ರಯಾಣವನ್ನು ಬೆಳೆಸಲಿದ್ದಾರೆ.