ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಟಿ20 ವಿಶ್ವಕಪ್ನ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದರು. ಟಿ20 ವಿಶ್ವಕಪ್ನ ಅಂತ್ಯದ ಬಳಿಕ ತಾನು ಚುಟುಕು ಕ್ರಿಕೆಟ್ನ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು. ಈ ಬಗ್ಗೆ ಮೊದಲೇ ಕೆಲ ವರದಿಗಳು ಪ್ರಕಟವಾಗಿತ್ತಾದರೂ ಕೊಹ್ಲಿ ಈ ನಿರ್ಧಾರ ತೆಗೆದುಕೊಳ್ಳಬಹುದೆಂದು ಬಹುತೇಕ ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ಸುದ್ದಿಯನ್ನು ನಿಜವಾಗಿಸಿ ಅಚ್ಚರಿ ಉಂಟು ಮಾಡಿದ್ದರು.
ಟೀಮ್ ಇಂಡಿಯಾದ ಟಿ20 ನಾಯಕತ್ವದಿಂದ ಕೆಳಗಿಳಿಯುವ ವಿರ್ಆಟ್ ಕೊಹ್ಲಿಯ ಈ ನಿರ್ಧಾರ ಅಭಿಮಾನಿಗಳಿಗೆ ಮಾತ್ರವಲ್ಲ ಬಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷ ಸೌರವ್ ಗಂಗೂಲಿಗೂ ಕೂಡ ಆಶ್ಚರ್ಯ ಮೂಡಿಸಿತ್ತು. ಈ ವಿಚಾರವನ್ನು ಸ್ವತಃ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ಬಿಸಿಸಿಐ ಯಾವುದೇ ಒತ್ತಡವನ್ನು ಹಾಕಿ ಟಿ20 ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕರಳಗಿಳಿಸಿಲ್ಲ. ಸ್ವತಃ ವಿರಾಟ್ ಕೊಹ್ಲಿಯೇ ಈ ನಿರ್ಧಾರವನ್ನು ಕೈಗೊಂಡಿದ್ದರು ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಯಾರು ಏನು ಹೇಳಿದ್ದಾರೆ?
ಇನ್ನು ಈ ಸಂದರ್ಭದಲ್ಲಿ ಸೌರವ್ ಗಂಗೂಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರಕ್ಕೆ ನೀಡಿದ ಕಾರಣವನ್ನು ಅರ್ಥ ಮಾಡಿಕೊಂಡರು ಎಂಬುದಾಗಿಯೂ ವಿವರಿಸಿದ್ದಾರೆ. ಭಾರತದಂತಾ ದೇಶದ ಕ್ರಿಕೆಟ್ ತಂಡವನ್ನು ಮೂರು ಮಾದರಿಯಲ್ಲಿಯೂ ಮುನ್ನಡೆಸುವುದು ಸುಲಭದ ಕೆಲಸವಲ್ಲ. ಒಂದು ಹಂತದಲ್ಲಿ ತನಗೂ ಈ ಒತ್ತಡದ ಅನುಭವ ಉಂಟಾಗಿತ್ತು ಎಂಬುದನ್ನು ಸೌರವ್ ಗಂಗೂಲಿ ಉಲ್ಲೇಖಿಸಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾದ ಬಳಗವನ್ನು ಘೋಷಣೆ ಮಾಡಿದ ಬಳಿಕ ವಿರಾಟ್ ಕೊಹ್ಲಿ ಈ ನಿರ್ಧಾರವನ್ನು ಬಹಿರಂಗಪಡಿಸಿದ್ದರು. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಂಡ ಬಳಿಕ ತಾನು ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು. ಇದಕ್ಕೆ ಕೆಲಸದ ಒತ್ತಡವೇ ಕಾರಣವಾಗಿದ್ದು ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದರು.
ಟಿ20 ವಿಶ್ವಕಪ್ 2021: ಶ್ರೀಲಂಕಾ ನಂತರ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ಸ್ಕಾಟ್ಲೆಂಡ್
ಗಮನಾರ್ಹ ಸಂಗತಿಯೆಂದರೆ ವಿರಾಟ್ ಕೊಹ್ಲಿ ಈ ಬಾರಿಯ ಟಿ20 ವಿಶ್ವಕಪ್ನ ನಂತರ ಟೀಮ್ ಇಂಡಿಯಾ ನಾಯಕತ್ವ ತೊರೆಯುವ ನಿರ್ಧಾರ ಪ್ರಕಟಿಸಿದ ಬಳಿಕ ಐಪಿಎಲ್ನ ವಿಚಾರವಾಗಿಯೂ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು. ಐಪಿಎಲ್ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಕೆಲವೇ ಕ್ಷಣಗಳಿರುವಾಗಿ ವಿರಾಟ್ ಕೊಹ್ಲಿ ಈ ಬಾರಿಯ ಆವೃತ್ತಿಯಲ್ಲಿ ಕೊನೆಯ ಬಾರಿಗೆ ಆರ್ಸಿಬಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದೇನೆ. ಮುಂದಿನ ಆವೃತ್ತಿಯಿಂದ ಕೇವಲ ಆಟಗಾರನಾಗಿ ಮಾತ್ರವೇ ತಂಡದಲ್ಲಿ ಉಳಿದುಕೊಳ್ಳಲಿದ್ದೇನೆ ಎಂದು ಕೊಹ್ಲಿ ಘೋಷಣೆ ಮಾಡಿದ್ದರು.
"ಕೊಹ್ಲಿ ಈ ನಿರ್ಧಾರವನ್ನು ತೆಗೆದುಕೊಂಡಾಗ ನಾನು ಆಶ್ಚರ್ಯಗೊಂಡಿದ್ದೆ. ಇಂಗ್ಲೆಂಡ್ ಪ್ರವಾಸದ ನಂತರವೇ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಅದಕ್ಕಾಗಿ ಅವರ ಮೇಲೆ ಯಾವುದೇ ಒತ್ತಡಗಳು ಇರಲಿಲ್ಲ. ನಾವು ಅವರ ಬಳಿ ಈ ಬಗ್ಗೆ ಏನನ್ನೂ ಹೇಳಿರಲಿಲ್ಲ" ಎಂದು ಇಂಡಿಯಾ ಟುಡೇ ಜೊತೆಗೆ ನಡೆಸಿದ ಮಾತುಕತೆಯಲ್ಲಿ ಗಂಗೂಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್: ಎರಡು ಅಭ್ಯಾಸ ಪಂದ್ಯ ಅಂತ್ಯ, ವಿರಾಟ್ ಕೊಹ್ಲಿಗೆ ತಲೆನೋವಾಗಿದೆ 3 ಸ್ಥಾನಗಳು!
"ನಾನು ಕೂಡ ಆರು ವರ್ಷಗಳ ಕಾಲ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದೇನೆ. ಅದು ಹೊರಗಡೆಯಿಂದ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಗೌರವ ಎಲ್ಲವೂ ದೊರೆಯುತ್ತದೆ. ಆದರೆ ಒಳಗಡೆಯಿಂದ ನೀವು ಸಾಕಷ್ಟು ಒತ್ತಡವನ್ನು ಅನುಭವಿಸಿರುತ್ತೀರಿ. ಇದು ಎಲ್ಲಾ ನಾಯಕರಿಗೂ ಅನುಭವಕ್ಕೆ ಬಂದಿರುತ್ತದೆ. ಇದು ಕೇವಲ, ತೆಂಡೂಲ್ಕರ್, ಗಂಗೂಲಿ, ಧೋನಿ ಅಥವಾ ಕೊಹ್ಲಿಗೆ ಮಾತ್ರವಲ್ಲ. ಮುಂಬರುವ ನಾಯಕರಿಗೂ ಅನುಭವಕ್ಕೆ ಬರುತ್ತದೆ. ಅದು ನಿಜಕ್ಕೂ ಕಠಿಣವಾದ ಕರ್ತವ್ಯ" ಎಂದು ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.