
ಮುಂಬೈ, ಆಗಸ್ಟ್ 16: ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ರವಿ ಶಾಸ್ತ್ರಿ ಮರು ಆಯ್ಕೆಯಾದುದರ ಹಿಂದ ನಾಯಕ ವಿರಾಟ್ ಕೊಹ್ಲಿ ಅವರ ಪ್ರಭಾವ ಕಿಂಚಿತ್ತೂ ಇಲ್ಲವೆಂದು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಯ ಮುಖ್ಯಸ್ಥ ಹಾಗೂ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಸ್ಪಷ್ಟ ಪಡಿಸಿದ್ದಾರೆ.
ಮೈಕ್ ಹೇಸನ್ ಮತ್ತು ಟಾಮ್ ಮೂಡಿ ಅವರಂತಹ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿದ ರವಿ ಶಾಸ್ತ್ರಿ, 2021ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ವರೆಗೆ ಭಾರತ ತಂಡದ ಕೋಚ್ ಸ್ಥಾನದಲ್ಲಿ ಮುಂದುವರಿಯುಂತೆ ಕ್ರಿಕೆಟ್ ಸಲಹಾ ಸಮಿತಿಯಿಂದ ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಸಹಾಯಕ ಸಿಬ್ಬಂದಿ ನೇಮಕ ನಂತರ ನಡೆಯಲಿದೆ.
"ಖಂಡಿತಾ ಕೋಚ್ ಆಯ್ಕೆ ವಿಚಾರದಲ್ಲಿ ಕೊಹ್ಲಿ ಅವರ ಸಲಹೆ ಪಡೆದಿಲ್ಲ. ಒಂದು ವೇಳೆ ಆ ರೀತಿ ಮಾಡಬೇಕಿದ್ದರೆ, ಇಡೀ ತಂಡದಿಂದಲೇ ಸಲಹೆ ಪಡೆದುಕೊಳ್ಳುತ್ತಿದ್ದೆವು. ಹೀಗಾಗಿ ಯಾರನ್ನೂ ಈ ವಿಚಾರವಾಗಿ ಕೇಳಿಲ್ಲ. ಇದಕ್ಕೆ ಅರ್ಥವೂ ಇಲ್ಲ," ಎಂದು ವಿರಾಟ್ ಪ್ರಭಾವದ ಕುರಿತಾಗಿ ಕೇಳಲಾದ ಪ್ರಶ್ನೆಗೆ ಕಪಿಲ್ ಉತ್ತರಿಸಿದ್ದಾರೆ.
ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಉಳಿದೆಲ್ಲಾ ಅಭ್ಯರ್ಥಿಗಳಿಗಿಂತಲೂ ಶಾಸ್ತ್ರಿ ಅವರ ಸಾಧನೆ ಅತ್ಯುತ್ತಮವಾಗಿದೆ. ಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಸ್ಥಾನಕ್ಕೇರಿದೆ. ಎಲ್ಲದಕ್ಕಿಂತಲೂ ಮಿಗಿಲಾಗಿ 71 ವರ್ಷಗಳ ಬಳಿಕ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆಯನ್ನು ಮಾಡಿತ್ತು.
ಆದರೆ, ಇದೇ ಶಾಸ್ತ್ರಿ ಅವರ ಮಾರ್ಗದರ್ಶನ ಪಡೆದ ಭಾರತ ತಂಡ 2015 ಮತ್ತು 2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳಲ್ಲಿ ಮುಗ್ಗರಿಸಿತ್ತು.
ಇನ್ನು ಭಾರತ ತಂಡ ವಿಶ್ವಕಪ್ ಸೆಮಿಫೈನಲ್ಸ್ನಲ್ಲಿ ಮುಗ್ಗರಿಸುತ್ತಿರುವ ಕುರಿತಾಗಿ ಕೇಳಲಾದ ಪ್ರಶಸ್ನೆಗೆ ಉತ್ತರಿಸಿದ ಕಪಿಲ್, "ಈ ಮಾನದಂಡ ಸರಿಯಲ್ಲ. ಶಾಸ್ತ್ರಿ ಅವರ ದಾಖಲೆ ಮತ್ತು ಮುಂದೆ ಅವರು ತಂಡಕ್ಕೆ ಏನನ್ನು ನೀಡಬಲ್ಲರು ಎಂಬುದನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದಿದ್ದರೆ.
2017ರ ಜುಲೈನಲ್ಲಿ ನಾಯಕ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ನಂತರ ಕೋಚ್ ಸ್ಥಾನ ಪಡೆದುಕೊಂಡ ರವಿ ಶಾಸ್ತ್ರಿ, ಅಂದಿನಿಂದ ಇಂದಿನವರೆಗೆ ಭಾರತ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಂತೆ ಮಾಡಿದ್ದಾರೆ. ಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ 21 ಟೆಸ್ಟ್ಗಳಲ್ಲಿ 13 ಪಂದ್ಯಗಳನ್ನು ಗೆದ್ದಿದೆ. 60 ಓಡಿಐಗಳಲ್ಲಿ 43 ಮತ್ತು 36 ಪಂದ್ಯಗಳಲ್ಲಿ 25 ಪಂದ್ಯಗಳನ್ನು ಗೆದ್ದಿದೆ.
"ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದವರೆಲ್ಲಾ ಉತ್ತಮರೆ. ಆದರೆ ರವಿ ಶಾಸ್ತ್ರಿ ಅವರಲ್ಲಿ ಆಟಗಾರರೊಡನೆ ಉತ್ತಮವಾಗಿ ಮಾತನಾಡಿ ನಿಭಾಯಿಸುವ ಕಲೆಯಿದೆ. ಆದರೂ ಇದನ್ನು ಪರಿಗಣಿಸಿದೆ ಅವರ ಪ್ರೆಸೆಂಟೇಷನ್ ಗಮನಿಸಿ ಅದರ ಆಧಾರದ ಮೇರೆಗೆ ಆಯ್ಕೆ ಮಾಡಲಾಗಿದೆ," ಎಂದಿದ್ದಾರೆ.