ಬಹು ನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಗೆ ದಿನಗಣನೆ ಆರಂಭವಾಗಿದೆ. ಉಭಯ ತಂಡಗಳು ಈ ಸರಣಿಗಾಗಿ ಮೈದಾನದಲ್ಲಿ ತಾಲೀಮು ನಡೆಸಿವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಣಕ್ಕೆ ಇಳಿಯಲಿದ್ದಾರೆ. ಅಲ್ಲದೆ ಈ ಇಬ್ಬರೂ ಸ್ಟಾರ್ ಆಟಗಾರರಿಗೆ ಇದೇ ಕೊನೆಯ ಸರಣಿ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಈಗ ಬಗ್ಗೆ ರನ್ ಮಶೀನ್ ಖ್ಯಾತಿಯ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ.
ಭಾನುವಾರದಿಂದ ಆರಂಭವಾಗುವ ಸರಣಿಗೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಶುಕ್ರವಾರ ಮೈದಾನದಲ್ಲಿ ತಾಲೀಮು ನಡೆಸಿದರು. ಈ ವೇಳೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸವನ್ನು ನಡೆಸಿದರು. ಈ ಮೂಲಕ ಈ ಸರಣಿಗೆ ತಾವು ಫಿಟ್ ಇರುವುದಾಗಿ ತೋರಿಸಿದ್ದು, ಮುಂದಿನ ಗುರಿಯನ್ನು ಅಭಿಮಾನಿಗಳಿಗೆ ತಿಳಿಸಿದಂತೆ ಕಾಣುತ್ತಿತ್ತು. ವಿರಾಟ್ ಅಭ್ಯಾಸ ಮಾಡುವ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ಮಧ್ಯೆ ವಿರಾಟ್ ತಮ್ಮ ನಿವೃತ್ತಿಯ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆಯೂ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. "ನೀವು ಬಿಟ್ಟುಕೊಡಲು ನಿರ್ಧರಿಸಿದಾಗ ನೀವು ನಿಜವಾಗಿಯೂ ವಿಫಲರಾಗುತ್ತೀರಿ" ಎಂದು ಬರೆದುಕೊಂಡಿದ್ದಾರೆ. 2027 ರ ಏಕದಿನ ವಿಶ್ವಕಪ್ವರೆಗೆ ಟೀಮ್ ಇಂಡಿಯಾದ ಭಾಗವಾಗಿ ಉಳಿಯುತ್ತಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗೆ ವಿರಾಟ್ ಸಾಮಾಜಿಕ ತಾಣದಲ್ಲಿ ಉತ್ತರ ನೀಡಿದಂತೆ ಇದೆ.
ಈ ಮೊದಲೇ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಅಜಿತ್ ಅಗರ್ಕರ್ ಸಹ ಈ ಬಗ್ಗೆ ಹೇಳಿಕೆ ನೀಡಿದ್ದರು. ಇಬ್ಬರೂ ಆಟಗಾರರು ಫಿಟ್ನೆಸ್ ಪರೀಕ್ಷೆಗಳಲ್ಲಿ ಪಾಸ್ ಆಗಿದ್ದಾರೆ. ಇವರಿಬ್ಬರೂ ಸಂಪೂರ್ಣವಾಗಿ ಫಿಟ್ ಆಗಿದ್ದರಿಂದ ತಂಡಕ್ಕೆ ಆಯ್ಕೆ ಆಗಿದ್ದಾರೆ. ಅವರನ್ನು ಸಹ 2027ರ ವಿಶ್ವಕಪ್ ದೃಷ್ಟಿಯಲ್ಲಿ ಇಟ್ಟುಕೊಂಡೇ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದರು. ವಿರಾಟ್ ಹಾಗೂ ರೋಹಿತ್ ಅವರಿಗೆ ಈ ಸರಣಿ ಉಭಯ ತಂಡಗಳಿಗೂ ಮುಖ್ಯವಾಗಿದೆ. ಅವರ ಭವಿಷ್ಯ ಈ ಸರಣಿಯ ಮೇಲೆ ನಿರ್ಧಾರವಾಗಲಿದೆ.

ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಶುಭಮನ್ ಗಿಲ್ ಪಡೆ ಮತ್ತೊಂದು ಅಗ್ನಿ ಪರೀಕ್ಷೆಗೆ ಸಿದ್ಧವಾಗಲಿದೆ. ತವರಿನಲ್ಲಿ ವಿಂಡೀಸ್ ಸವಾಲನ್ನು ಗೆದ್ದ ಬಳಿಕ, ಏಕದಿನ ಫಾರ್ಮೆಟ್ನಲ್ಲೂ ತನ್ನ ಕಮಾಲ್ ಮಾಡಲು ಗಿಲ್ ಸಿದ್ಧರಾಗಿದ್ದಾರೆ. ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಈ ಸರಣಿ ಮುಗಿದ ಬಳಿಕ ಭಾರತ ಹಾಗೂ ಆಸೀಸ್ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಮುನ್ನಡೆಸಲಿದ್ದಾರೆ. ಈ ಎರಡೂ ಸರಣಿಗಳು ಅಭಿಮಾನಿಗಳ ಚಿತ್ತ ಕದ್ದಿವೆ.