ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 12 ವರ್ಷಗಳ ನಂತರ ತಮ್ಮ ತವರು ತಂಡ ದೆಹಲಿಗಾಗಿ ರಣಜಿ ಪಂದ್ಯವನ್ನು ಆಡುತ್ತಿದ್ದಾರೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಮತ್ತು ರೈಲ್ವೇಸ್ ನಡುವಿನ ಪಂದ್ಯದಲ್ಲಿ ತಮ್ಮ ನಾಯಕ 'ವಿರಾಟ್' ನೋಡಲು ಅಪಾರ ಅಭಿಮಾನಿಗಳು ಜಮಾಯಿಸಿದ್ದಾರೆ. ವಿರಾಟ್ ಕೊಹ್ಲಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳನ್ನು ನಿರಾಸೆಗೊಳಿಸದೆ ಅವರಿಗೆ ಸಾಕಷ್ಟು ಮನರಂಜನೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಈ ಪಂದ್ಯದ ಲಂಚ್ ಬ್ರೇಕ್ ವೇಳೆಯಲ್ಲಿ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಖಾದ್ಯವನ್ನು ಸವಿದಿದ್ದಾರೆ. ವಿರಾಟ್ ಕೊಹ್ಲಿ ಚಿಲ್ಲಿ ಚಿಕನ್ ಅಥವಾ ಚೋಲೆ ಪೂರಿ ಸೇವಿಸಲಿಲ್ಲ. ಆದರೆ ಮತ್ತೊಂದು ರುಚಿಕರವಾದ ಖಾದ್ಯವನ್ನು ಸೇವಿಸಿದ್ದಾರೆ. ಇದರ ಬಗ್ಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಕ್ಯಾಂಟೀನ್ ಶೆಫ್ ಸಂಜಯ್ ಝಾ ಮಾಹಿತಿ ನೀಡಿದ್ದಾರೆ.

ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ದೆಹಲಿ ಮತ್ತು ರೈಲ್ವೇಸ್ ನಡುವಿನ ಪಂದ್ಯದ ಮೊದಲ ದಿನದಂದು ವಿರಾಟ್ ಕೊಹ್ಲಿ ಲಂಚ್ ಬ್ರೇಕ್ನಲ್ಲಿ ತಮ್ಮ ನೆಚ್ಚಿನ ಚಿಲ್ಲಿ ಪನೀರ್ ಆರ್ಡರ್ ಮಾಡಿ ತಿಂದಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಹೆಚ್ಚು ನಾನ್ ವೆಜ್ ತಿನ್ನುತ್ತಿದ್ದರು. ಆಗ ಚಿಲ್ಲಿ ಚಿಕನ್ ಕೊಹ್ಲಿಯ ನೆಚ್ಚಿನ ಆಹಾರವಾಗಿತ್ತು. ಆದರೆ 2018 ರಲ್ಲಿ, ಕೊಹ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನ ಬಿಡುವಿಲ್ಲದ ವೇಳಾಪಟ್ಟಿಗಾಗಿ ಫಿಟ್ ಆಗಿರಲು ನಾನ್ ವೆಜ್ ತಿನ್ನುವುದನ್ನು ತ್ಯಜಿಸಲು ನಿರ್ಧರಿಸಿದ್ದರು. ಅಲ್ಲಿಂದ ವಿರಾಟ್ ಕೊಹ್ಲಿ ಅಪ್ಪಟ ಸಸ್ಯಾಹಾರಿಯಾಗಿದ್ದಾರೆ.
ರೈಲ್ವೇಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ಚೋಲೆ ಪೂರಿ ತಿನ್ನಲು ನಿರಾಕರಿಸಿದ್ದರು ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಚೋಲೆ ಪೂರಿ ಬದಲಿಗೆ ಅವರು ಅನ್ನ ಹಾಗೂ ಮಜ್ಜಿಗೆಯ ಕಡಿ ಹಾಕಿಕೊಂಡು ಇಷ್ಟ ಪಟ್ಟು ತಿಂಡಿ ತಿಂದಿರುವುದಾಗಿ ಹೇಳಿದ್ದರು. ಈಗ ಬಾಣಸಿಗ ಸಂಜಯ್ ಝಾ ಅವರು ವಿರಾಟ್ ಕೊಹ್ಲಿಯ ಆಹಾರ ಪದ್ಧತಿಯ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಸಂಜಯ್ ಝಾ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ (ಡಿಡಿಸಿಎ) ಕಳೆದ 20 ವರ್ಷಗಳಿಂದ ಶೆಫ್ ಆಗಿದ್ದಾರೆ.
ಸಂದರ್ಶನ ವೊಂದರಲ್ಲಿ ಮಾತನಾಡಿರುವ ಸಂಜಯ್ ಝಾ, 'ನಾನು 25 ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿದ್ದೇನೆ. ನನಗೆ ಬಾಲ್ಯದಿಂದಲೂ ವಿರಾಟ್ ಕೊಹ್ಲಿ ಪರಿಚಯವಿದೆ. ಅವರು ರಣಜಿ ಪಂದ್ಯಗಳ ಸಂದರ್ಭದಲ್ಲಿ ನಮ್ಮ ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿದ್ದರು. ಇಲ್ಲಿಂದ ವೃತ್ತಿಜೀವನ ಆರಂಭಿಸಿದ ಅವರಿಗೆ ಯಾವುದೇ ಅಹಂಕಾರವಿಲ್ಲ. ಇಂದಿಗೂ ಅವರು ನಮ್ಮೊಂದಿಗೆ ಮಾತನಾಡುವಾಗ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಳ್ಳುತ್ತಾರೆ ಎಂದು ಕೊಹ್ಲಿ ಬಗ್ಗೆ ತಿಳಿಸಿದ್ದಾರೆ.
ಮೊದಲು ಚಿಲ್ಲಿ ಚಿಕನ್ ಕೊಹ್ಲಿ ಅವರಿಗೆ ಅಚ್ಚುಮೆಚ್ಚಿನದಾಗಿತ್ತು. ಅವರು ಚಿಲ್ಲಿ ಚಿಕನ್ ತಿನ್ನುವುದು ಮಾತ್ರವಲ್ಲದೆ ತಮ್ಮ ಸಹಾ ಆಟಗಾರರಿಗೂ ಶಿಫಾರಸು ಮಾಡುತ್ತಿದ್ದರು. ಈಗ ಅವರು ಚೋಲೆ ಪೂರಿ ಮತ್ತು ಚಿಲ್ಲಿ ಚಿಕನ್ ಬದಲಿಗೆ ಅನ್ನ ಹಾಗೂ ಮಜ್ಜಿಗೆಯ ಕಡಿ ತಿಂದಿದ್ದಾರೆ. ಇಂದು ನಾನು ಅವರನ್ನು ಹೊರಗಿನಿಂದ ಏನಾದರೂ ಆರ್ಡರ್ ಮಾಡಬೇಕೇ ಎಂದು ಕೇಳಿದೆ, ಆದರೆ ಅವರು ನಿರಾಕರಿಸಿ ನಮ್ಮ ಕ್ಯಾಂಟೀನ್ನಲ್ಲೇ ತಯಾರಿಸಿದ ಚಿಲ್ಲಿ ಪನ್ನೀರ್ ತಿಂದಿದ್ದಾರೆ ಎಂದು ಸಂಜಯ್ ಝಾ ಹೇಳಿದ್ದಾರೆ.