
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಚೆನ್ನೈನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದೆ. ಈ ಮೂಲಕ ಸುದೀರ್ಘ ಒಂದು ವರ್ಷದ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಪುನಾರಂಭವಾಗಿದೆ. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಪಂದ್ಯಕ್ಕೂ ಮುನ್ನ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂಲಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವಾಪಾಸಾಗಿದೆ. ಈ ಮೂಲಕ ಭಾರತದಲ್ಲಿ ಅತ್ಯಂತ ಸೂಕ್ತ ಸಂದರ್ಭದಲ್ಲಿ ಕ್ರಿಕೆಟ್ ಮರಳಿದಂತಾಗಿದೆ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಪ್ರತಿ ದೇಶವು ಕೂಡ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿತ್ತು. ನಾವು ಮಾತ್ರವೇ ಕ್ರಿಕೆಟ್ ಪುನಾರಂಭಿಸಲು ಬಾಕಿ ಉಳಿದಿತ್ತು. ಅದಕ್ಕಾಗಿ ಸಮಯ ಬೇಕಾಗಿತ್ತು. ಆದರೆ ಈಗ ಅದಕ್ಕೆ ಸೂಕ್ತವಾದ ಸಂದರ್ಭ ಒದಗಿ ಬಂದಿದೆ. ಈಗ ಪರಿಸ್ಥಿತಿ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ. ದೊಡ್ಡ ಕೆಲಸವನ್ನು ಮಾಡಲಾಗಿದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಈಗ ನಾವು ಭಾರತದಲ್ಲಿ ಬಯೋ ಬಬಲ್ನಲ್ಲಿದ್ದೇವೆ. ಆದರೆ ಅಭ್ಯಾಸಕ್ಕೆ ತೆರಳುವಾಗ ನಮಗೆ ಸುರಕ್ಷತೆಯ ಭಾವನೆ ಮೂಡುತ್ತದೆ. ಯಾವುದೇ ಸಂದರ್ಭದಲ್ಲೂ ಅಸುರಕ್ಷತೆಯ ಭಾವನೆ ಬರುವುದಿಲ್ಲ. ಭಾರತದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಡುವುದು ನಮಗೆಲ್ಲರಿಗೂ ಅತ್ಯಂತ ವಿಶೇಷವಾದ ಸಂದರ್ಭವಾಗಿರುತ್ತದೆ" ಎಂದು ಕೊಹ್ಲಿ ಹೇಳಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಶಹಬಾಜ್ ನದೀಮ್, ಜಸ್ಪ್ರೀತ್ ಬೂಮ್ರಾ
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಡೇನಿಯಲ್ ಲಾರೆನ್ಸ್, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್