ಗುರುವಾರ, ಜುಲೈ 4ರಂದು ಮುಂಬೈನಲ್ಲಿ ನಡೆದ ಭಾರತ ಕ್ರಿಕೆಟ್ ತಂಡದ ಟಿ20 ವಿಶ್ವಕಪ್ ವಿಜಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಡರಾತ್ರಿ ಮುಂಬೈನಿಂದ ಲಂಡನ್ಗೆ ಪ್ರಯಾಣ ಬೆಳೆಸಿದರು.
ಗಮನಾರ್ಹ ಸಂಗತಿಯೆಂದರೆ, ಬೆರಿಲ್ ಚಂಡಮಾರುತದಿಂದಾಗಿ ಮೂರು ದಿನಗಳ ಕಾಲ ಬಾರ್ಬಡೋಸ್ನಲ್ಲಿ ಸಿಲುಕಿದ್ದ ಭಾರತೀಯ ಕ್ರಿಕೆಟ್ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಅವರ ಕುಟುಂಬಗಳು ಏರ್ ಇಂಡಿಯಾ ಚಾರ್ಟರ್ಡ್ ವಿಮಾನದ ಮೂಲಕ ನವದೆಹಲಿಗೆ ಮರಳಿದರು.

ದೀರ್ಘ ವಿಳಂಬದ ನಂತರ, ಟೀಮ್ ಇಂಡಿಯಾ ಆಟಗಾರರು ಅಂತಿಮವಾಗಿ ಗುರುವಾರ ಮುಂಜಾನೆ ನವದೆಹಲಿಗೆ ಬಂದಿಳಿದರು ಮತ್ತು ಅವರಿಗೆ ವಿಮಾನನಿಲ್ದಾಣ ಮತ್ತು ಐಟಿಸಿ ಮೌರ್ಯ ಹೋಟೆಲ್ನಲ್ಲಿ ರೋಮಾಂಚನಕಾರಿ ಸ್ವಾಗತ ಕೋರಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಭಾರತ ತಂಡದ ತಂಡದ ಸದಸ್ಯರಿಗೆ ಅತಿಥ್ಯ ವಹಿಸಿದ್ದರು. ಲಘು ಸಂಭಾಷಣೆಯ ನಂತರ, ಭಾರತ ತಂಡಕ್ಕೆ ವಿಶೇಷ ಉಪಹಾರ ಏರ್ಪಡಿಸಲಾಗಿತ್ತು. ಅಲ್ಲಿ ಸುಮಾರು 90 ನಿಮಿಷಗಳ ಕಾಲ ಕಳೆದರು.

ಆ ಬಳಿಕ, ಇಡೀ ಭಾರತ ತಂಡವು ವಿಶೇಷ ರೋಡ್ ಶೋಗಾಗಿ ಮುಂಬೈಗೆ ಪ್ರಯಾಣ ಬೆಳೆಸಿತು. ಅಲ್ಲಿ ಆಟಗಾರರು ತಮ್ಮ ನೆಚ್ಚಿನ ತಾರೆಯರನ್ನು ಹತ್ತಿರದಿಂದ ನೋಡಲು ನೆರೆದಿದ್ದ ಅಭಿಮಾನಿಗಳ ಸಮೂಹಕ್ಕೆ ಟ್ರೋಫಿಯೊಂದಿಗೆ ಪೋಸ್ ನೀಡಿದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡೆಯಿಂದ ಸನ್ಮಾನಿಸಲಾಯಿತು. ನಂತರ ಟೀಮ್ ಇಂಡಿಯಾ ಆಟಗಾರರು "ಚಕ್ ದೇ ಇಂಡಿಯಾ, "ವಂದೇ ಮಾತರಂ' ಹಾಡುಗಳಿಗೆ ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಇಡೀ ದಿನ ಸಂಭ್ರಮಾಚರಣೆಯಲ್ಲಿ ತೊಡಗಿದ ಆಯಾಸದ ಹೊರತಾಗಿಯೂ, ವಿರಾಟ್ ಕೊಹ್ಲಿ ತಮ್ಮ ಕುಟುಂಬವನ್ನು ಸೇರಲು ಲಂಡನ್ಗೆ ವಿಮಾನ ಪ್ರಯಾಣ ಬೆಳಿಸಿದರು.
ವಿರಾಟ್ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಇಬ್ಬರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ಈಗಾಗಲೇ ಯುಕೆಯಲ್ಲಿದ್ದಾರೆ ಎಂದು ವರದಿಯಾಗಿದೆ.
2024ರ ಟಿ20 ವಿಶ್ವಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದರು. ನಂತರದ ಪಂದ್ಯಾವಳಿಯ ಯಾವುದೇ ಪಂದ್ಯಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ.
ಇದೇ ವೇಳೆ, 2024ರ ಟಿ20 ವಿಶ್ವಕಪ್ನ ಪಂದ್ಯಾವಳಿಯುದ್ದಕ್ಕೂ ರನ್ ಗಳಿಸಲು ಹೆಣಗಾಡುತ್ತಿದ್ದ ವಿರಾಟ್ ಕೊಹ್ಲಿ, ಅಂತಿಮವಾಗಿ ಫೈನಲ್ನಲ್ಲಿ 59 ಎಸೆತಗಳಲ್ಲಿ 76 ರನ್ ಗಳಿಸು ಮೂಲಕ ಫಾರ್ಮ್ಗೆ ಮರಳಿದರು ಮತ್ತು ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಫೈನಲ್ ಪಂದ್ಯಕ್ಕೂ ಮುನ್ನ 35 ವರ್ಷದ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿ ಇರಲಿಲ್ಲ. ಟಿ20 ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್ ಆರಂಭಿಸಿದ್ದ ಕೊಹ್ಲಿ, ಮೊದಲ ಏಳು ಪಂದ್ಯಗಳಲ್ಲಿ ಕೇವಲ 75 ರನ್ ಗಳಿಸಿದ್ದರು.