ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ. 2002ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ ಜೊತೆ ಜಂಟಿ ವಿಜೇತರರಾಗಿತ್ತು. ಇದಾದ ನಂತರ 2013ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಇತಿಹಾಸ ಸೃಷ್ಟಿಸಿದೆ.
ಭಾರತ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವುದರಲ್ಲಿ ವಿರಾಟ್ ಕೊಹ್ಲಿ ಕೊಡುಗೆಯೂ ಮುಖ್ಯವಾಗಿದೆ. ಟೂರ್ನಿಯಲ್ಲಿ ಕೊಹ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಈಗ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿರುವ ಭಾರತ ಚಾಂಪಿಯನ್ ಆಗಿದೆ. ಈ ವೇಳೆ ಮಾತನಾಡಿರುವ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡವನ್ನು ಶ್ಲಾಘಿಸಿದ್ದಾರೆ. ನಾವು ಅವರ ಪ್ರದರ್ಶನದಿಂದ ಯಾವಾಗಲೂ ಪ್ರಭಾವಿತರಾಗಿದ್ದೇವೆ. ಪ್ರತಿಭಾನ್ವಿತ ತಂಡದಲ್ಲಿ ಸೀಮಿತ ಸಂಖ್ಯೆಯ ಆಟಗಾರರಿದ್ದರೂ, ಅವರು ತಮ್ಮ ಯೋಜನೆಗಳನ್ನು ಚೆನ್ನಾಗಿ ಕಾರ್ಯಗತಗೊಳಿಸುತ್ತಾರೆ. ಅವರು ಯಾವಾಗಲೂ ಆಟದಲ್ಲಿ ಉಳಿಯುವ ಕ್ರಿಕೆಟ್ ಆಡುತ್ತಾರೆ. ಅವರು ಯಾವಾಗಲೂ ಬೌಲರ್ಗಳನ್ನು ಬೆಂಬಲಿಸುತ್ತಾರೆ. ಅತ್ಯುತ್ತಮ ಫೀಲ್ಡಿಂಗ್ ತಂಡ ಕೂಡ ಹೌದು ಎಂದು ಹೇಳಿದ್ದಾರೆ.
ನನ್ನ ಉತ್ತಮ ಸ್ನೇಹಿತ (ಕೇನ್ ವಿಲಿಯಮ್ಸನ್) ಸೋಲುವುದನ್ನು ನೋಡುವುದು ದುಃಖಕರವಾಗಿದೆ. ಆದರೆ ಅವರು ಯಾವಾಗಲೂ ತುಂಬಾ ಒಳ್ಳೆಯವರು. ಅವರು ತಮ್ಮ ಬೇಸಿಕ್ ಆಟವನ್ನು ಚೆನ್ನಾಗಿ ಆಡತ್ತಲೇ ಇರುತ್ತಾರೆ. ಅದು ಅವರನ್ನು ಇಂತಹ ಸ್ಪರ್ಧಾತ್ಮಕ ತಂಡವನ್ನಾಗಿ ಮಾಡುತ್ತದೆ ಎಂದು ಕೇನ್ ವಿಲಿಯಮ್ಸನ್ ಬಗ್ಗೆ ವಿರಾಟ್ ಕೊಹ್ಲಿ ಬೇಸರಗೊಂಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಸೋಲಿನ ನಿರಾಶೆಯ ನಂತರ, ತಂಡವು ದೊಡ್ಡ ಟೂರ್ನಿಯಲ್ಲಿ ಕಮ್ಬ್ಯಾಕ್ ಮಾಡಿದೆ. ಚಾಂಪಿಯನ್ಸ್ ಟ್ರೋಫಿಯ ಗೆಲುವು ತುಂಬಾ ವಿಶೇಷವಾಗಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆಟಗಾರರು ತಮ್ಮ ಆಟವನ್ನು ಮತ್ತಷ್ಟು ಮುಂದೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ನಾವು (ಹಿರಿಯ ಆಟಗಾರರು) ಅವರಿಗೆ ಸಹಾಯ ಮಾಡಲು ಸಂತೋಷಪಡುತ್ತೇವೆ. ನಮ್ಮ ಅನುಭವಗಳನ್ನು ಹಂಚಿಕೊಳ್ಳುವುದರಿಂದಲೇ ಈ ಟೀಮ್ ಇಂಡಿಯಾ ಬಲಿಷ್ಠವಾಗಿದೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.