ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ನಲ್ಲಿ ಭಾರತ ತಂಡವು ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿತು. ಈ ಮೆಗಾ ಟೂರ್ನಿಯ ನಂತರ ಹಲವು ಸ್ಟಾರ್ ಆಟಗಾರರು ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ದವು. ಕ್ರಿಕೆಟ್ ಅಭಿಮಾನಿಗಳು ಕೂಡು ಒಂದಷ್ಟು ಆಟಗಾರರು ನಿವೃತ್ತಿ ಘೋಷಣೆ ಮಾಡಬಹುದು ಅಂದುಕೊಂಡಿದ್ದರು. ಅದರಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಕೂಡ ಇದ್ದರು.
ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಮಾತ್ರವಲ್ಲ, ಆಟದಿಂದ ನಿವೃತ್ತರಾದಾಗ ಭಾರತೀಯ ಕ್ರಿಕೆಟ್ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ನನ್ನ ಕೆಲಸ ಎಂದು ಹೇಳಿದ್ದಾರೆ.

ವಿರಾಟ್ ಅವರ ಈ ಹೇಳಿಕೆಯಿಂದ ಒಂದು ವಿಷಯ ಸ್ಪಷ್ಟವಾಗಿದೆ, ಅವರು ಈಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವ ಉದ್ದೇಶವನ್ನು ಹೊಂದಿಲ್ಲ. ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ಮುನ್ನ ವಿರಾಟ್ ಕೊಹ್ಲಿ ನಿವೃತ್ತಿ ಹೊಂದುತ್ತಾರೆ ಎಂಬ ಊಹಾಪೋಹಗಳು ಹರಡಿದ್ದವು. ಇದೀಗ ಎಲ್ಲಾ ವದಂತಿಗಳಿಗೆ ವಿರಾಟ್ ಕೊಹ್ಲಿ ತಮ್ಮ ಹೇಳಿಕೆ ಮೂಲಕ ತೆರೆ ಎಳೆದಿದ್ದಾರೆ.
ನೀವು ನಿವೃತ್ತಿ ಘೋಷಣೆ ಮಾಡುವಾಗ ತಂಡವನ್ನು ಉತ್ತಮ ಸ್ಥಾನದಲ್ಲಿ ಇಡುವುದು ಮುಖ್ಯವಾಗಿದೆ. ಮುಂದಿನ ಎಂಟು ವರ್ಷಗಳ ಕಾಲ ಜಗತ್ತಿನ ಯಾವುದೇ ತಂಡವನ್ನು ಎದುರಿಸಲು ಸಿದ್ಧವಾಗಿರುವ ತಂಡ ನಮ್ಮಲ್ಲಿದೆ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಫೈನಲ್ನಲ್ಲಿ ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತು. ಆದರೆ ಪಾಕಿಸ್ತಾನ ವಿರುದ್ಧ ಶತಕ ಬಾರಿಸಿ ಮಿಂಚಿದರೆ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ ಕೊಹ್ಲಿ ಗಳಿಸಿದ ಅರ್ಧಶತಕ ಮುಖ್ಯವಾಗಿತ್ತು.
ಆಸ್ಟ್ರೇಲಿಯಾದ ಕಠಿಣ ಪ್ರವಾಸದ ನಂತರ ನಾವು ಚೇತರಿಸಿಕೊಂಡು ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಬಯಸಿದ್ದೆವು. ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದು ಅದ್ಭುತ. ಶುಭಮನ್ ಗಿಲ್ ಅವರೊಂದಿಗೆ ನಿಂತು, ತಂಡದ ಹಿರಿಯ ಆಟಗಾರನಾಗಿ, ಮುಂದಿನ ಪೀಳಿಗೆಯನ್ನು ಸಿದ್ಧಪಡಿಸುವತ್ತಲೂ ನನ್ನ ಗಮನವಿದೆ. ಡ್ರೆಸ್ಸಿಂಗ್ ರೂಮಿನಲ್ಲಿ ತುಂಬಾ ಪ್ರತಿಭೆಗಳಿವೆ ಮತ್ತು ಅವರು ತಮ್ಮ ಆಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಹಿರಿಯ ಆಟಗಾರರಾಗಿ, ನಮ್ಮ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಮತ್ತು ಅವರಿಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ. ಅದಕ್ಕಾಗಿಯೇ ಟೀಮ್ ಇಂಡಿಯಾ ತುಂಬಾ ಬಲಿಷ್ಠವಾಗಿದೆ ಎಂದು ವಿರಾಟ್ ಕೊಹ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ಕೂಡ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ರೋಹಿತ್ ಶರ್ಮಾ ಕೂಡ ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ನಾನು ಸದ್ಯಕ್ಕೆ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಆಗುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.