ಮೊಹಾಲಿ, ನವೆಂಬರ್ 24: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಗೆದ್ದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ ಹೊರೆಸಿ ಕೆಲ ಮಾಧ್ಯಮಗಳು ವರದಿ ಮಾಡಿದ್ದಕ್ಕೆ ಕೋಚ್ ಅನಿಲ್ ಕುಂಬ್ಳೆ ಗರಂ ಆಗಿದ್ದರೆ.
'ಪಂದ್ಯದ ಅಂಪೈರ್, ರೆಫ್ರಿಯಾಗಲಿ ಯಾರಿಗೂ ಕಾಣಿಸದ ದೋಷ ಮಾಧ್ಯಮದವರಿಗೆ ಕಾಣಿಸಿದೆ. ಮಾಧ್ಯಮಗಳಲ್ಲಿ ಬಂದ ಸುದ್ದಿಗೆಲ್ಲ ಪ್ರತಿಕ್ರಿಯಿಸಲಾರೆ. ಕೊಹ್ಲಿ ಮೇಲಿನ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿದೆ ಎಂದು ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಬ್ರಿಟನ್ನಿನ ಟ್ಯಾಬ್ಲ್ಯಾಡ್ ಪತ್ರಿಕೆಯೊಂದು ಕೊಹ್ಲಿ ಅವರು ಎಂಜಲು ಹಚ್ಚುವ ಜತೆಗೆ ಚ್ಯೂಯಿಂಗ್ ಕಮ್ ಸಿಹಿಯನ್ನು ಚೆಂಡಿಗೆ ಉಜ್ಜಿದ್ದಾರೆ ಎಂದು ಆರೋಪಿಸಿ ವಿಡಿಯೋ ಫುಟೇಜ್ ಪ್ರಸಾರ ಮಾಡಿತ್ತು. ರಾಜ್ ಕೋಟ್ ನಲ್ಲಿ ನಡೆದ ಪಂದ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡುಪ್ಲೆಸಿಸ್ ಅವರು ಚೆಂಡು ವಿರೂಪಗೊಳಿಸಿದ್ದು ಸಾಬೀತಾಗಿತ್ತು. ಇದರಿಂದ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 100ರಷ್ಟು ಕಡಿತಗೊಳಿಸಲಾಗಿತ್ತು. ಆದರೆ, ಕೊಹ್ಲಿ ಅವರು ನಿಯಮ ಮೀರಿ ಏನು ಮಾಡಿಲ್ಲ. ಮಾಧ್ಯಮದ ವರದಿ ಸುಳ್ಳು ಎಂದು ಕೋಚ್ ಕುಂಬ್ಳೆ ಹೇಳಿದ್ದಾರೆ. (ಪಿಟಿಐ)