
ನವದೆಹಲಿ, ಜುಲೈ 24: ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಾಗ ಇಡೀ ದೇಶದ ಕ್ರಿಕೆಟ್ ಅಮಾನಿಗಳು ನಿರಾಶೆ ಅನುಭವಿಸಿದ್ದರು. ಅಂದಿನ ಸೋಲಿನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮತ್ತೆ ತುಟಿ ಬಿಚ್ಚಿದ್ದಾರೆ.
ನ್ಯೂಜಿಲೆಂಡ್-ಭಾರತ ನಡುವಿನ ಆ ಸೆಮಿಫೈನಲ್ ಪಂದ್ಯ ಮಳೆಯ ಕಾರಣಕ್ಕೆ ಎರಡು ದಿನಗಳ ಕಾಲ ಮುಂದುವರೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 239 ರನ್ ಪೇರಿಸಿತ್ತು. ಚೇಸಿಂಗ್ ಇಳಿದ ಭಾರತ, ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ವೈಫಲ್ಯದಿಂದಾಗಿ 221 ರನ್ ಗಳಿಸಿ 18 ರನ್ಗಳಿಂದ ಪಂದ್ಯವನ್ನು ಕಳೆದುಕೊಂಡಿತ್ತು.
ಸೆಮಿಫೈನಲ್ ಸೋಲಿನ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಕೊಹ್ಲಿ, 'ಬದುಕಿನಲ್ಲಿ ಹೆಚ್ಚಿನದ್ದನ್ನು ನಾನು ಸೋಲು ಮತ್ತು ಹಿನ್ನೆಡೆಗಳಿಂದಲೇ ಕಲಿಯುತ್ತಿದ್ದೇನೆ. ಅತೀ ಕೆಟ್ಟ ಸೋಲೊಂದು ನನಗೆ ಸ್ಫೂರ್ತಿಯ ಪಾಠ ಹೇಳೋದಷ್ಟೇ ಅಲ್ಲ, ಜೊತೆಗೆ ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿಸುವಲ್ಲಿ ಕೊಡುಗೆ ನೀಡುತ್ತಿದೆ,' ಎಂದಿದ್ದಾರೆ.
'ಗೆಲುವಿಗಿಂತಲೂ ಹೆಚ್ಚಾಗಿ, ದೊಡ್ಡ ಸೋಲು ನನಗೆ ಆಕ್ಷಣದ ಮಹತ್ವವನ್ನು ಅರ್ಥೈಸಿಕೊಳ್ಳಲು ನೆರವಾಗುತ್ತಿದೆ. ಸೋಲೊಂದು, ನೀವು ಸುಮ್ಮನೆ ಕೂತ ಮುಂದೇನು ಮಾಡಬೇಕು ಅನ್ನೋದನ್ನು ಯೋಚಿಸುವಂತೆ ಮಾಡುತ್ತದೆ. ನಿಮ್ಮಷ್ಟಕೇ ನೀವೊಂದು ಮಾರ್ಗಸೂಚಿ ತಯಾರಿಸಲು ಪ್ರೇರೇಪಿಸುತ್ತದೆ,' ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
'ಎರಡನೆಯದಾಗಿ ಹೇಳೋದ್ರಾದ್ರೆ, ಸೋಲಿನಂತ ಕ್ಷಣಗಳಿವೆಯಲ್ಲ? ಅವು ಕಷ್ಟದ ಕಾಲದಲ್ಲಿ ನಿಮ್ಮ ಜೊತೆ ಯಾರು ನಿಲ್ಲುತ್ತಾರೆ, ನಿಮ್ಮಿಂದ ಯಾರು ದೂರವಾಗ್ತಾರೆ ಅನ್ನೋದನ್ನು ತಿಳಿಸಿಕೊಡುತ್ತದೆ,' ಎಂದು ಸಂದರ್ಶನದಲ್ಲಿ ಕೊಹ್ಲಿ ಮೌಲ್ಯಯುತ ಮಾತುಗಳನ್ನಾಡಿದರು.