ಭಾನುವಾರ ಆರ್ಸಿಬಿ, ದೆಹಲಿಯ ಅರುಣ್ ಜೇಟ್ಲಿ ಅಂಗಳದಲ್ಲಿ ಅಬ್ಬರಿಸಿದೆ. ರಜತ್ ಪಟಿದಾರ್ ಪಡೆ ಸತತ ಆರನೇ ಬಾರಿಗೆ ತವರಿನಾಚೆ ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಇದಕ್ಕೆ ಕಾರಣ ಕೆಎಲ್ ರಾಹುಲ್ ಸೆಲೆಬ್ರೇಷನ್. ರಾಹುಲ್ ಆರ್ಸಿಬಿ ತಂಡವನ್ನು ಬೆಂಗಳೂರಿನಲ್ಲಿ ಮಣಿಸಿ, ಕಾಂತಾರ ಸ್ಟೈಲ್ನಲ್ಲಿ ಸಭ್ರಮಾಚರಣೆ ಮಾಡಿದ್ದರು. ಈ ವೇಳೆ ಇದು ನನ್ನ ಮೈದಾನ ಎಂದು ಸಾರಿ ಹೇಳಿದ್ದರು.
ಈ ಪಂದ್ಯ ಮುಗಿದು ಭಾನುವಾರ 17 ದಿನಗಳೇ ಕಳೆದಿದ್ದವು. ಆದರೆ ಆ ಸಂಭ್ರಮಾಚರಣೆಗೆ ವಿರಾಟ್ ಕೊಹ್ಲಿ ಯಾವ ರೀತಿ ಉತ್ತರ ನೀಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಏಕೆಂದರೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ವಿರಾಟ್ ಕೊಹ್ಲಿ ತವರು ನೆಲವಾಗಿದೆ. ವಿರಾಟ್ ಯಾವುದನ್ನು ತಮ್ಮ ಬಳಿ ಇಟ್ಟುಕೊಳ್ಳುವ ವ್ಯಕ್ತಿ ಅಲ್ಲವೇ ಅಲ್ಲ. ಅವರಿಗೆ ಬೇರೆಯವರು ನೀಡಿದರೆ, ಅವರಿಗೂ ಅದೇ ಧಾಟಿಯಲ್ಲಿ ಉತ್ತರ ನೀಡ್ತಾರೆ. ಹೀಗಾಗಿ ವಿರಾಟ್ ಏನು ಸೆಲೆಬ್ರೇಷನ್ ಮಾಡ್ತಾರೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿತ್ತು.

ಭಾನುವಾರ ನಡೆದ 18ನೇ ಆವೃತ್ತಿಯ 46ನೇ ಪಂದ್ಯದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ ರಜತ್ ಪಟಿದಾರ್ ಚೇಸ್ ಮಾಡಲು ಮುಂದಾದರು. ಈ ವೇಳೆ ಆರ್ಸಿಬಿ ಬೌಲರ್ಗಳು ಬಿಗುವಿನ ದಾಳಿ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 162 ರನ್ಳಿಗೆ ಕಟ್ಟಿ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್ಸಿಬಿ ತಂಡದ ಆರಂಭ ತೀರಾ ಕಳಪೆಯಾಗಿತ್ತು. 4 ಓವರ್ಗಳಲ್ಲಿ 26 ರನ್ ಸಿಡಿಸಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್ಗೆ 84 ಎಸೆತಗಳಲ್ಲಿ 119 ರನ್ ಸೇರಿಸಿತು. ವಿರಾಟ್ ತಮ್ಮ ತವರು ಅಂಗಳದಲ್ಲಿ 4 ಬೌಂಡರಿ ನೆರವಿನಿಂದ 51 ರನ್ ಬಾರಿಸಿ ಸಿಕ್ಸರ್ ಬಾರಿಸಲು ಹೋಗಿ ಔಟ್ ಆದರು. ಕೃನಾಲ್, ಟೀಮ್ ಡೇವಿಡ್ ತಂಡವನ್ನು ಗೆಲುವಿನ ದಡ ದಾಟಿಸಿದರು.
ಪಂದ್ಯವನ್ನು ಆರ್ಸಿಬಿ ಗೆದ್ದಾಗ ಕ್ಯಾಮೆರಾ ಕಣ್ಣುಗಳು ವಿರಾಟ್ ಕೊಹ್ಲಿ ಮೇಲೆ ಕೇಂದ್ರಿ ಕೃತವಾಗಿದ್ದವು. ಆದರೆ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಶೈಲಿಯಿಂದ ಸಂಭ್ರಮಾಚರಣೆ ಮಾಡಿದರು. ಆದರೆ ರಾಹುಲ್ ಸೆಲೆಬ್ರೇಷನ್ಗೆ ಯಾವುದೇ ಪ್ರತಿಉತ್ತರ ನೀಡಲಿಲ್ಲ. ಇದಕ್ಕೆ ಫ್ಯಾನ್ಸ್ ಸಹ ಕೊಂಚ ಬೇಸರಗೊಂಡಂತೆ ಕಂಡು ಬಂದಿತು. ಆದರೆ ವಿರಾಟ್ ಆರೆಂಜ್ ಕ್ಯಾಪ್ ಪಡೆದ ಬಳಿಕ ರಾಹುಲ್ ಜೊತೆಗೆ ಮಾತನಾಡಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್, ಕರುಣ್ ನಾಯರ್ ಮೈದಾನದ ಒಂದು ತುದಿಯಲ್ಲಿ ನಿಂತು ಮಾತನಾಡುತ್ತಿದ್ದರು. ಆಗ ವಿರಾಟ್ ಅಲ್ಲಿಗೆ ಬಂದರು. ಬಳಿಕ ವಿರಾಟ್ ಬೆಂಗಳೂರಿನಲ್ಲಿ ನೀವು ಪಂದ್ಯವನ್ನು ಗೆದ್ದಾಗ ಈ ರೀತಿ ಸಂಭ್ರಮಾಚರಣೆಯನ್ನು ಮಾಡಿದ್ದೀರಿ ಎಂದು ಸನ್ನೆ ಮಾಡಿ ತಿಳಿಸಿದರು. ಇದಾದ ಬಳಿಕ ರಾಹುಲ್ ಹೆಗಲ ಮೇಲೆ ಕೈ ಹಾಕಿದ ವಿರಾಟ್ ನಗ್ಗುತ್ತಿರುವುದು ಕಂಡು ಬಂದಿತು.
ವಿರಾಟ್ ಕೊಹ್ಲಿ ಇಲ್ಲದ ಶಾಟ್ ಹೊಡೆಯಲು ಹೋಗಿ ಔಟ್ ಆದರು. ತಂಡ ಪಂದ್ಯವನ್ನು ಗೆದ್ದಾಗ ವಿರಾಟ್ ಡಗೌಟ್ನಲ್ಲಿದ್ದರು. ಒಂದು ವೇಳೆ ಅಜೇಯರಾಗಿ ಪಂದ್ಯವನ್ನು ವಿರಾಟ್ ಗೆಲ್ಲಿಸಿದ್ದರೆ, ಸಂಭ್ರಮಾಚರಣೆಯೇ ಬೇರೆ ತರ ಇರುತ್ತಿತ್ತು.