ಸಾಮಾನ್ಯವಾಗಿ ಒಂದು ಸರಣಿಯ ಸೋಲು ಆಟಗಾರರ ಆತ್ಮವಿಶ್ವಾಸದ ಮೇಲೆ ಪೆಟ್ಟು ನೀಡುತ್ತದೆ. ಇದರಿಂದ ಅವರ ಆಟದ ಮೇಲೂ ನೇರ ಪರಿಣಾಮ ಬೀರಬಹುದು. ಇನ್ನು ಅನೇಕ ಬಾರಿ ಇದರಿಂದ ಮನನೊಂದು ಆಟಗಾರರು ಆಟಕ್ಕೆ ಗುಡ್ ಬಾಯ್ ಹೇಳುತ್ತಾರೆ. ಇಂತಹದ್ದೇ ಒಂದು ಪ್ರಸಂಗಕ್ಕೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಸಾಕ್ಷಿಯಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಹುಡುಕುತ್ತಾ ಹೋದಾಗ ಆ ಒಂದು ಸರಣಿಯ ಸೋಲು ಎಂದು ತೋರುತ್ತದೆ.
ಭಾರತ ಇತ್ತೀಚಿನ ಕೆಲ ವರ್ಷಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿತ್ತು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ಎರಡು ಬಾರಿ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆ ಸಹ ಭಾರತದ್ದಾಗಿತ್ತು. ಆದರೆ ಭಾರತ ಕಂಡು ಆ ಒಂದು ಸೋಲು ನಿಜಕ್ಕೂ ಆಟಗಾರರಿಗೆ ಘಾಸಿ ಉಂಟು ಮಾಡಿದೆ. ಇದರಿಂದ ಅವರು ನಿವೃತ್ತಿ ನಿರ್ಧಾರ ತೆಗೆದುಕೊಳ್ಳುವಂತೆ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂದಹಾಗೆ ಇದಕ್ಕೆಲ್ಲಾ ತಾಳೆ ಹಾಕಿ ನೋಡಿದಾಗ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯ ಸೋಲು ಎದ್ದು ಕಾಣುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಯಿತು. ಪರ್ತ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು ಬಿಟ್ಟರೆ, ಮೆಲ್ಬೋರ್ನ್ನಲ್ಲಿ ಡ್ರಾ ಸಾಧಿಸಿದ್ದೇ ದೊಡ್ಡ ಸಾಧನೆ ಆಯಿತು. ಈ ಸೋಲು ಆಟಗಾರರಿಗೆ ನೋವು ತಂದಿತು. ಆದರೆ ನಿವೃತ್ತಿ ಪಡೆಯಲು ಅಸಲಿ ಕಾರಣ ಬೇರೆಯದ್ದೇ ಇರಬಹುದು.
ಆಸ್ಟ್ರೇಲಿಯಾ ವಿರುದ್ಧದ ಸೋಲು ಟೀಮ್ ಇಂಡಿಯಾ ಆಟಗಾರರ ಮನೋಸ್ಥೈರ್ಯವನ್ನು ಕುಗ್ಗಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೂ ಮೊದಲು ಭಾರತದಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯ ಸೋಲು ಟೀಮ್ ಇಂಡಿಯಾ ಆಟಗಾರರಿಗೆ ಕಂಗೆಡುವಂತೆ ಮಾಡಿತು. ಭಾರತ ಇತ್ತೀಚಿನ ವರ್ಷಗಳಲ್ಲಿ ತವರಿನಲ್ಲಿ ಈ ರೀತಿಯಾದ ಸೋಲನ್ನು ಕಂಡಿರಲೇ ಇಲ್ಲ. ಇದರ ನೇರ ಪರಿಣಾಮ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮೇಲೆ ಆಯಿತು.

ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಆರಂಭವಾಗುವ ಮುನ್ನ, ಸರಣಿ ಗೆಲ್ಲುವ ನೆಚ್ಚಿನ ತಂಡ ಎಂದು ರೋಹಿತ್ ಪಡೆಯನ್ನು ಗುರುತಿಸಲಾಗಿತ್ತು. ಆದರೆ ಆಗಿದ್ದೇ ಬೇರೆ ರೋಹಿತ್ ಪಡೆ ತವರಿನಲ್ಲಿ ಮೂರು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕಪಟ್ಟಿಯಲ್ಲಿ ಪೆಟ್ಟು ತಿಂದಿತು. ಭಾರತ, ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನ 8 ಪಂದ್ಯಗಳನ್ನು ಆಡಬೇಕಿತ್ತು. ಈ ವೇಳೆ ಕನಿಷ್ಠ 4 ಪಂದ್ಯಗಳನ್ನು ಗೆದ್ದಿದ್ದರೆ ಭಾರತ ನಿಶ್ಚಿತವಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ನ್ಯೂಜಿಲೆಂಡ್ ವಿರುದ್ದದ ಮೂರು ಸೋಲು ತಂಡಕ್ಕೆ ಪೆಟ್ಟು ನೀಡಿತು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಹ್ಯಾಟ್ರಿಕ್ ಸರಣಿ ಗೆಲುವಿನ ಆಸೆಯಿಂದಲೇ ಹೋಗಿತ್ತು. ಆದರೆ ಈ ಬಾರಿ ರೋಹಿತ್ ಪಡೆಯ ಆಟ ಅಂದುಕೊಂಡ ಹಾಗೆ ನಡೆಯಲಿಲ್ಲ. ಪರಿಣಾಮ ಸರಣಿ ಕೈ ಚೆಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಿಂದಲೂ ಹೊರ ಬಿದ್ದಿತು. ಇದರಿಂದ ಆಟಗಾರರಿಗೆ ಬೇಸರವೂ ಆಯಿತು. ಕೈಯಲ್ಲಿ ಇದ್ದ ಬೆಣ್ಣೆಯನ್ನು ತಿನ್ನುವ ಬದಲು, ಕರಗಿದ ಮೇಲೆ ತಿನ್ನಲಿಲ್ಲ ಎಂಬ ನೋವು ನಿಶ್ಚಿತವಾಗಿ ಆಟಗಾರರಿಗೆ ಕಾಡಿತು. ಇದರಿಂದಾಗಿಯೇ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ವೈಟ್ ಡ್ರೆಸ್ ಕಳಿಚುವಂತೆ ಆಯಿತು. ಈ ಮೂವರು ಕ್ರಿಕೆಟ್ ಆಟಗಾರರು ನಿವೃತ್ತಿ ಘೋಷಿಸಲು ತವರಿನ ಸೋಲು ಬಹುವಾಗಿ ಕಾಡಿದಂತೆ ಕಾಣುತ್ತಿದೆ.