
ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿ ಮುಕ್ತಾಯವಾಗಿದ್ದು ಡಿಸೆಂಬರ್ 17ರಿಂದ ಟೆಸ್ಟ್ ಸರಣಿಗೆ ಚಾಲನೆ ದೊರೆಯಲಿದೆ. ಅಡಿಲೇಡ್ನಲ್ಲಿ ಮೊದಲ ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ಸಾಗಲಿದೆ. ಆದರೆ ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿಗೆ ಬಿಸಿಸಿಐ ಪಿತೃತ್ವದ ರಜೆಯನ್ನು ನೀಡಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಅಲಭ್ಯತೆ ಟೀಮ್ ಇಂಡಿಯಾದಲ್ಲಿ ತುಂಬುವುದು ಅಸಾಧ್ಯ. ಆ ಸ್ಥಾನ ಬರಿದಾಗಲಿದೆ ಎಂದು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಾರತದ ಬೆಂಚ್ ಸ್ಟ್ರೆಂತ್ ಉತ್ತಮವಾಗಿದ್ದು ಯುವ ಆಟಗಾರರು ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕಿದೆ ಎಂದಿದ್ದಾರೆ.
"ವಿರಾಟ್ ಕೊಹ್ಲಿಯಂತಾ ಅನುಭವಿ ಆಟಗಾರನ ಸೇವೆಯನ್ನು ನೀವು ಕಳೆದುಕೊಂಡರೆ ಆ ಸ್ಥಾನ ಬರಿದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಇದು ವ್ಯಕ್ತಿಗಳ ವಿಚಾರವಲ್ಲ. ಇದು ನಮ್ಮ ತಂಡದ ವಿಚಾರ. ಉತ್ತಮವಾದ ಸಂಗತಿಯೆಂದರೆ ಟೀಮ್ ಇಂಡಿಯಾದಲ್ಲಿ ಉತ್ತಮ ಬೆಂಚ್ ಸ್ಟ್ರೆಂತ್ ಇದೆ" ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
"ವೈಯಕ್ತಿಕ ಕಾರಣಗಳಿಗಾಗಿ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲೇಬೇಕಿದೆ. ಆ ಸ್ಥಾನದಲ್ಲಿ ಯುವ ಆಟಗಾರರು ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಇದು ಇನ್ನೊಬ್ಬ ಆಟಗಾಋನಿಗೆ ದೊರೆಯುವ ಉತ್ತಮ ಅವಕಾಶವಾಗಿದೆ" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಕಳೆದ ಬಾರಿಯ ಪ್ರವಾಸದ ಆಸ್ಟ್ರೇಲಿಯಾ ತಂಡಕ್ಕಿಂತ ಈ ಬಾರಿ ಆಸ್ಟ್ರೇಲಿಯಾ ತಂಡ ಬಲಿಷ್ಟವಾಗಿದೆ. ನಿಮ್ಮ ತಂಡದ ಒಂದಿಬ್ಬರು ಅನುಭವಿ ಆಟಗಾರರು ಇಲ್ಲದಿದ್ದರೆ ಆ ಸ್ಥಾನ ಖಾಲಿಯಾದ ಭಾವನೆ ಬರುತ್ತದೆ. ಅದೇ ಸ್ಥಿತಿಯನ್ನು ಆಸ್ಟ್ರೇಲಿಯಾ ಈ ಹಿಂದೆ ಹೊಂದಿತ್ತು ಎಂದಿರುವ ತೆಂಡೂಲ್ಕರ್ ಭಾರತದ ಬೌಲಿಂಗ್ ವಿಭಾಗದಲ್ಲಿ ಬೂಮ್ರಾ ಅಶ್ವಿನ್ ಅವರಂತಾ ಆಟಗಾರರನ್ನು ಹೊಂದಿದ್ದು ಆಸ್ಟ್ರೇಲಿಯಾಗೆ ಸವಾಲೊಡ್ಡಬಹುದು ಎಂದಿದ್ದಾರೆ.