
ಹ್ಯಾಮಿಲ್ಟನ್, ಜನವರಿ 31: ಹ್ಯಾಮಿಲ್ಟನ್ನಲ್ಲಿ ಗುರುವಾರ (ಜನವರಿ 31) ನಡೆದ ಭಾರತ-ನ್ಯೂಜಿಲ್ಯಾಂಡ್ 4ನೇ ಏಕದಿನ ಪಂದ್ಯದಲ್ಲಿ ತಕ್ಕಮಟ್ಟಿಗೆ ತಂಡದ ಪರ ಹೋರಾಡಿದ ಭಾರತದ ವೇಗಿ, ಭುವನೇಶ್ವರ್ ಕುಮಾರ್ ಪಂದ್ಯದ ಸೋಲಿನ ಪರಾಮರ್ಶೆ ಮಾಡಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿಯ ಅನುಸ್ಥಿತಿ ಭಾರತದ ಬ್ಯಾಟಿಂಗ್ ವಿಭಾಗವನ್ನು ಕಾಡಿತು ಎಂದು ಭುವಿ ಹೇಳಿಕೊಂಡಿದ್ದಾರೆ.
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಮೂರೂ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ, 4ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿತ್ತು. ಪರಿಣಾಮ ದೇಸಿ ತಂಡ ಆತಿಥೇಯರ ವಿರುದ್ಧ 8 ವಿಕೆಟ್ ಹೀನಾಯ ಸೋಲು ಕಂಡಿತು.
ಪಂದ್ಯದ ಬಳಿಕ ಮಾತನಾಡಿದ ಭುವನೇಶ್ವರ್, 'ನಮಗಿದು ಸೋಲಿನ ಪರಾಮರ್ಶೆಗೆ ಸಮಯ. ಉತ್ತಮ ಆಟ ಆಡಿದ್ದ ನಾವು ಇವತ್ತು ಇಂಥದ್ದೊಂದು ಪಂದ್ಯವನ್ನು ಎದುರುಗೊಂಡಿದ್ದೇವೆ. ಕೊಹ್ಲಿ ಅನುಪಸ್ಥಿತಿಯೂ ನಮ್ಮನ್ನು ಈ ಸಂದರ್ಭದಲ್ಲಿ ಕೊಂಚ ಕಾಡಿತು' ಎಂದರು.
'ಸರಣಿ ಗೆದ್ದ ಬಳಿಕ ಈ ಪಂದ್ಯವನ್ನೂ ಸುಲಭವಾಗಿ ಗೆದ್ದುಕೊಳ್ಳುವ ವಿಶ್ವಾಸದಲ್ಲಿ ನಾವಿದ್ದೆವು. ಆದರೆ ಅದಾಗಲಿಲ್ಲ. ಈ ಹೊತ್ತು ನಾನು ನ್ಯೂಜಿಲ್ಯಾಂಡ್ ಬೌಲರ್ಗಳ ಪ್ರದರ್ಶನವನ್ನು ಮರೆಮಾಚಲು ಬಯಸುವುದಿಲ್ಲ. ಅವರೂ ನಮ್ಮೆದುರು ಉತ್ತಮ ಬೌಲಿಂಗ್ ಪ್ರದರ್ಶಿಸಿದರು' ಎಂದು ಭುವಿ ಅರ್ಧಪೂರ್ಣ ಮಾತುಗಳನ್ನಾಡಿದರು.
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, 30.5 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದು 92 ಕನಿಷ್ಠ ರನ್ನೊಂದಿಗೆ ಇನ್ನಿಂಗ್ಸ್ ಮುಗಿಸಿತು. 93 ರನ್ ಸುಲಭ ಗುರಿ ಬೆನ್ನತ್ತಿದ ಕೇನ್ ವಿಲಿಯಮ್ಸನ್ ಬಳಗ, ಹೆನ್ರಿ ನಿಕೋಲ್ಸ್ ಅಜೇಯ 30, ರಾಸ್ ಟೇಲರ್ ಅಜೇಯ 37 ರನ್ ಬೆಂಬಲದೊಂದಿಗೆ 14.4 ಓವರ್ನಲ್ಲಿ 2 ವಿಕೆಟ್ ಕಳೆದು 93 ರನ್ ಪೇರಿಸುವುದರೊಂದಿಗೆ ಗೆಲುವಿನ ನಗು ಬೀರಿತು.