

ನವದೆಹಲಿ, ಜುಲೈ 11: ಮುಂಬರಲಿರುವ ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಬೇಕು ಎಂದು ಮಾಜಿ ಆಟಗಾರ ಸೌರವ್ ಗಂಗೂಲಿ ಹೇಳಿದ್ದಾರೆ.
ಕಳೆದ ಜುಲೈ-ಆಗಸ್ಟ್ ತಿಂಗಳಿನಲ್ಲಿನ ಭಾರತದ ತಂಡ ಶ್ರೀಲಂಕಾ ಪ್ರವಾಸದಲ್ಲಿ ಪಾಲ್ಗೊಂಡಿದ್ದಲ್ಲಿಂದ ಹಿಡಿದು ಈವರೆಗೆ ಕೆಎಲ್ ರಾಹುಲ್, ಕೇದಾರ್ ಜಾಧವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಮತ್ತು ಅಜಿಂಕ್ಯಾ ರಹಾನೆ ಹೀಗೆ ಆರು ವಿಭಿನ್ನ ಆಟಗಾರರು ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟಿಂಗ್ ಗೆ ಇಳಿದರೆ ಉತ್ತಮವೆಂದು ಮಾಜಿ ಕ್ಯಾಪ್ಟನ್ ಗಂಗೂಲಿ ಮಂಗಳವಾರ ಅಭಿಪ್ರಾಯಿಸಿದ್ದಾರೆ.
'ಇತ್ತೀಚಿಗಷ್ಟೇ ಮುಗಿದ ಟಿ20 ಸರಣಿಯನ್ನು ನೀವು ಗಮನಿಸಿದರೆ ಅಲ್ಲಿ ಸರಿಯಾದ ಬ್ಯಾಟಿಂಗ್ ಲೈನಪ್ ಕಂಡು ಬರುತ್ತದೆ. ರಾಹುಲ್ ಇಲ್ಲಿ ಮೂರನೇ ಕ್ರಮಾಂಕದಲ್ಲಿ ಬಂದರೆ, ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದಾರೆ. ಇದನ್ನು ನೋಡುವಾಗ ನನಗನ್ನಿಸುತ್ತದೆ; ಬ್ಯಾಟಿಂಗ್ ಕ್ರಮಾಂಕದಲ್ಲಿದ್ದ ಸಮಸ್ಯೆಯನ್ನು ಅರಿತುಕೊಂಡ ತಂಡ ಅದನ್ನು ಸರಿದೂಗಿಸಿರಬೇಕು. ಮತ್ತೀ ಬ್ಯಾಟಿಂಗ್ ಕ್ರಮಾಂಕ ಸರಿಯಾಗಿದೆಕೂಡ. ಮುಂದಿನ ಏಕದಿನ ಸರಣಿಯಲ್ಲೂ ಇದೇ ಬ್ಯಾಟಿಂಗ್ ಕ್ರಮಾಂಕ ಮುಂದುವರೆಸಿದರೆ ಉತ್ತಮ' ಎಂದು 'ದಾದಾ' ತಿಳಿಸಿದ್ದಾರೆ.
ಮುಂಬರಲಿರುವ ಏಕದಿನ ಸರಣಿಯಲ್ಲಿ ಕೊಹ್ಲಿ ಇದೇ ಕ್ರಮಾಂಕವನ್ನು ಅನುಸರಿಸುವುದಾಗಿ ನಾನು ಭಾವಿಸಿದ್ದೇನೆ' ಎಂದೂ 'ಬಂಗಾಳ ಹುಲಿ' ಗಂಗೂಲಿ ಹೇಳಿದರು. ಈ ಹಿಂದೆ ಅಂದರೆ 2014ರಲ್ಲಿ ಲಿಟ್ಲ್ ಮಾಸ್ಟರ್ ಸುನೀಲ್ ಗಾವಸ್ಕರ್ ಅವರೂ ಕೊಹ್ಲಿ 4 ಅಥವಾ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿಯಬೇಕು ಎಂದಿದ್ದರು.
ಇಂಗ್ಲೆಂಡ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಜುಲೈ 12ರಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಕೊಹ್ಲಿ ಅವರು ಗಂಗೂಲಿ ಮಾತನ್ನು ಪರಿಗಣಿಸುತ್ತಾರಾ ಕಾದು ನೋಡಬೇಕಿದೆ.