
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಂತೆ ಟೀಮ್ ಇಂಡಿಯಾ 0-2 ಅಂತರದಿಂದ ಕಳೆದುಕೊಂಡ ಬಳಿಕ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಟೀಮ್ ಇಂಡಿಯಾದ ಆಡುವ ಬಳಗ ಹಾಗೂ ನಾಯಕನ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದೆ. ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಕೂಡ ವಿರಾಟ್ ಕೊಹ್ಲಿ ನಾಯಕತ್ವದ ನಿರ್ಧಾರದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಆಶಿಶ್ ನೆಹ್ರಾ ಹೀಗೆ ಹೇಳಲು ಕಾರಣವೂ ಇದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಲು ಅವಕಾಶವನ್ನು ನೀಡಿದ್ದರು. ಗಾಯಗೊಂಡಿದ್ದ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡಲು ಸಂಪೂರ್ಣವಾಗಿ ಸಮರ್ಥವಾಗಿಲ್ಲ ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಪಡೆಯ ವೈಫಲ್ಯದ ನಂತರ ಆರನೇ ಬೌಲರ್ನ ಕೊರತೆಯ ಬಗ್ಗೆ ಚರ್ಚೆ ಎದ್ದಿತ್ತು. ಆ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಸಂಪೂರ್ಣವಾಗಿ ಫಿಟ್ ಇಲ್ಲ ಎಂದಿದ್ದರು. ಬಳಿಕ ಸ್ವತಃ ಹಾರ್ದಿಕ್ ಪಾಂಡ್ಯ ಕೂಡ ತಾನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದು ನಿಧಾನಕ್ಕೆ ಸೂಕ್ತ ಸಂದರ್ಭದಲ್ಲಿ ಬೌಲಿಂಗ್ನಲ್ಲಿ ಮರಳುವುದಾಗಿ ಹೇಳಿದ್ದರು.
ಆಶಿಶ್ ನೆಹ್ರಾ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಪಾಂಡ್ಯಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ದು ಆತುರದ ನಿರ್ಧಾರ ಎಂದಿದ್ದಾರೆ. ಇನ್ನು ಜಸ್ಪ್ರೀತ್ ಬೂಮ್ರಾಗೆ ಹೊಸ ಚೆಂಡಿನಲ್ಲಿ ಕೇವಲ ಎರಡು ಓವರ್ಗಳನ್ನು ಮಾತ್ರವೇ ಮಾಡಲು ಅವಕಾಶ ನೀಡಿದ್ದು ಯಾವ ಕಾರಣಕ್ಕೆ ಎಂದು ನೆಹ್ರಾ ಪ್ರಶ್ನಿಸಿದರು.
"ವಿರಾಟ್ ಕೊಹ್ಲಿ ತಮ್ಮ ನಿರ್ಧಾರಗಳಲ್ಲಿ ಆತುರವನ್ನು ಪಡುತ್ತಿದ್ದಾರೆ. ಮೊದಲ ಪಂದ್ಯದಲ್ಲೂ ಇದೇ ಆಗಿತ್ತು. ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಲವು ಬಾರಿ 350ಕ್ಕೂ ಅಧಿಕ ರನ್ಗಳನ್ನು ಬೆನ್ನಟ್ಟಿದ್ದಾರೆ. ಆತನಿಗೆ ಅದು ದೊಡ್ಡ ಸಂಗತಿಯಲ್ಲ. ಆದರೆ ಇಂದು ಅದು 375ರಂತೆ ಭಾಸವಾಗುತ್ತಿರಲಿಲ್ಲ. 475 ರನ್ಗಳನ್ನು ಚೇಸ್ ಮಾಡುತ್ತಿದ್ದಾರೆ ಎನಿಸುತ್ತಿತ್ತು ಎಂದು ನೆಹ್ರಾ ಹೇಳಿದ್ದಾರೆ.