
ಸದ್ಯ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಭಾರತ ಕ್ರಿಕೆಟ್ ತಂಡಗಳ ನಾಯಕತ್ವದ ಸುದ್ದಿ. ಹೌದು, ಭಾರತ ಕ್ರಿಕೆಟ್ ತಂಡ ಸದ್ಯ ಇಬ್ಬರು ನಾಯಕರನ್ನು ಪಡೆದುಕೊಂಡಿದ್ದು, ಭಾರತ ಸೀಮಿತ ಓವರ್ಗಳ ತಂಡಗಳಿಗೆ ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾಗಿದ್ದರೆ, ಅತ್ತ ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾಗಿದ್ದಾರೆ.
ವರ್ಷದ ಆರಂಭದಲ್ಲಿ ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಹೀಗೆ ಎಲ್ಲಾ ಮಾದರಿಯ ಭಾರತ ಕ್ರಿಕೆಟ್ ತಂಡಕ್ಕೂ ಏಕೈಕ ನಾಯಕನಾಗಿ ವಿರಾಟ್ ಕೊಹ್ಲಿ ಇದ್ದರು. ಆದರೆ ವರ್ಷಾಂತ್ಯದ ವೇಳೆಗೆ ಅದೇ ವಿರಾಟ್ ಕೊಹ್ಲಿ ಕೇವಲ ಭಾರತ ಟೆಸ್ಟ್ ತಂಡಕ್ಕೆ ಮಾತ್ರ ನಾಯಕನಾಗಿ ಉಳಿದುಕೊಂಡಿದ್ದಾರೆ. ಮೊದಲಿಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಇದೀಗ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಸಹ ವಜಾಗೊಂಡಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಮತ್ತು ಏಕದಿನ ತಂಡಗಳೆರಡರ ನಾಯಕತ್ವವನ್ನು ಕಳೆದುಕೊಂಡ ನಂತರ ನೂತನ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ.
ಇನ್ನು ಮೂಲಗಳು ತಿಳಿಸಿರುವ ಪ್ರಕಾರ ವಿರಾಟ್ ಕೊಹ್ಲಿಗೆ ಭಾರತ ಏಕದಿನ ತಂಡದ ನಾಯಕತ್ವವನ್ನು ಬಿಟ್ಟುಕೊಡುವುದು ಕೊಂಚವೂ ಇಷ್ಟವಿರಲಿಲ್ಲವಂತೆ. ಆದರೂ ಸಹ ಬಿಸಿಸಿಐ ಬಲವಂತವಾಗಿ ವಿರಾಟ್ ಕೊಹ್ಲಿಯಿಂದ ನಾಯಕತ್ವವನ್ನು ಕಸಿದುಕೊಂಡಿತು ಎಂಬ ಆಪಾದನೆ ಕೂಡ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದ್ದು, ತನಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವ ನೀಡಬೇಕೆಂದರೆ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ನೀಡಲೇಬೇಕೆಂದು ರೋಹಿತ್ ಶರ್ಮಾ ಹೇಳಿದ್ದರು ಎಂಬ ಸುದ್ದಿ ಕೂಡಾ ವೈರಲ್ ಆಗಿತ್ತು. ಹೀಗೆ ಬಿಸಿಸಿಐ ಅಂತಿಮವಾಗಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿ ರೋಹಿತ್ ಶರ್ಮಾ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹಾಕಿತು.
ಆದರೆ ಈ ಘಟನೆಯಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಇದ್ದ ಉತ್ತಮ ಬಾಂಧವ್ಯ ಹಾಳಾಗಿದ್ದು, ಇಬ್ಬರ ನಡುವೆ ಕೂಡ ವೈಮನಸ್ಸು ಉಂಟಾಗಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ರೋಹಿತ್ ಶರ್ಮ ವಿರಾಟ್ ಕೊಹ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ರೋಹಿತ್ ಶರ್ಮಾ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿರುವ ಏಕದಿನ ಸರಣಿಯಿಂದ ಇದೀಗ ವಿರಾಟ್ ಕೊಹ್ಲಿ ಹೊರಗುಳಿಯಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.
ಹೌದು, ರೋಹಿತ್ ಶರ್ಮಾ ಗಾಯದ ಸಮಸ್ಯೆಯನ್ನು ಹೇಳಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದರೆ ವೈಯಕ್ತಿಕ ಕಾರಣವನ್ನು ನೀಡಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲು ತೀರ್ಮಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ನಿಜಕ್ಕೂ ಹೊರಗುಳಿದಿದ್ದಾರಾ ಅಥವಾ ಇದೆಲ್ಲ ಸುಮ್ಮನೇ ಹರಿದಾಡುತ್ತಿರುವ ಗಾಳಿಸುದ್ದಿಯಾ ಎಂಬ ಅನುಮಾನ ಉಂಟಾಗಿದೆ. ಈ ರೀತಿಯ ಅನುಮಾನ ಉಂಟಾಗಲು ಕಾರಣ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ವಿಷಯವನ್ನು ಸ್ವತಃ ವಿರಾಟ್ ಕೊಹ್ಲಿ ಹೇಳದೇ ಇರುವುದು ಮತ್ತು ಬಿಸಿಸಿಐ ಅಧಿಕೃತವಾಗಿ ಘೋಷಿಸದೇ ಇರುವುದು. ಹೀಗಾಗಿ ಈ ವಿಷಯ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಖಚಿತವಾಗಿ ಪ್ರೇಕ್ಷಕರಿಗೆ ತಿಳಿಯಬೇಕೆಂದರೆ ಸ್ವತಃ ವಿರಾಟ್ ಕೊಹ್ಲಿಯೇ ಅದಕ್ಕೆ ಉತ್ತರಿಸಬೇಕು.
ಇನ್ನು ಇದೀಗ ಬಂದಿರುವ ಮಾಹಿತಿಯ ಪ್ರಕಾರ ವಿರಾಟ್ ಕೊಹ್ಲಿ ನಾಳೆ ( ಡಿಸೆಂಬರ್ 15 ) ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿಯೊಂದನ್ನು ನಡೆಸಲಿದ್ದು, ತಾವು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಭಾಗವಹಿಸುವುದಿಲ್ಲ ಎಂಬ ಸುದ್ದಿ ನಿಜವೋ ಅಥವಾ ಸುಳ್ಳೋ ಎಂಬುದರ ಕುರಿತು ಅಭಿಮಾನಿಗಳಿಗೆ ಸ್ಪಷ್ಟನೆಯನ್ನು ನೀಡಲಿದ್ದಾರೆ.