ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ ಜಟಾಪಟಿ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ಬಾರಿ ಐಪಿಎಲ್ನಲ್ಲಿ ಇವರಿಬ್ಬರ ನಡುವಿನ ಸಂಘರ್ಷ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಸಮಯದಲ್ಲಿ ಕೊಹ್ಲಿ ಗಂಗೂಲಿಗೆ ಹಸ್ತಲಾಘವ ನಿರಾಕರಿಸುವ ಮೂಲಕ ಸುದ್ದಿಯಾಗಿದ್ದರು. ಈಗ ಇದು ಮತ್ತೊಂದು ಹಂತಕ್ಕೆ ತಲುಪಿದ್ದು, ಇನ್ಸ್ಟಾಗ್ರಾಂನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿಕೊಂಡಿದ್ದಾರೆ.
ಆರ್ ಸಿಬಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಕೂಡ ಕೊಹ್ಲಿ ಡಗೌಟ್ನಲ್ಲಿ ಕುಳಿತಿದ್ದ ಗಂಗೂಲಿಯನ್ನು ಗುರಾಯಿಸಿದ್ದರು. ಈ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್ಗಳಿಂದ ಗೆಲುವು ಸಾಧಿಸಿತು. ಪಂದ್ಯದ ಗಳಿಕ ಉಭಯ ತಂಡದ ಆಟಗಾರರು, ಸಿಬ್ಬಂದಿಯ ಕೈ ಕುಲುಕುವ ಸಂದರ್ಭದಲ್ಲಿ ಕೊಹ್ಲಿ ಗಂಗೂಲಿಗೆ ಶೇಕ್ ಹ್ಯಾಂಡ್ ಕೊಡುವುದನ್ನು ತಪ್ಪಿಸಿದರು. ಗಂಗೂಲಿ ಹಿಂದೆ ಇದ್ದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿಪಾಂಟಿಂಗ್ ಗಂಗೂಲಿಗೆ ಶೇಕ್ ಹ್ಯಾಂಡ್ ನೀಡುವಂತೆ ಕೇಳಿದರೂ, ಕೊಹ್ಲಿ ಅದನ್ನು ನಿರಾಕರಿಸಿದಂತೆ ಸನ್ನೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ವೈರಲ್ ಆದ ಬಳಿಕ ಇಬ್ಬರೂ ಇನ್ಸ್ಟಾಗ್ರಾಂನಲ್ಲಿ ಒಬ್ಬರನೊಬ್ಬರು ಅನ್ಫಾಲೋ ಮಾಡುವ ಮೂಲಕ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. ಸೌರವ್ ಗಂಗೂಲಿ ಇನ್ಸ್ಟಾಗ್ರಾಂನಲ್ಲಿ 3 ಮಿಲಿಯನ್ಗಿಂತ ಹೆಚ್ಚಿನ ಫಾಲೋವರ್ಸ್ಗಳನ್ನು ಹೊಂದಿದ್ದಾರೆ, ಗಂಗೂಲಿ ಕೇವಲ 106 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ 246 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, 276 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
ಇಬ್ಬರ ನಡುವೆ ಅಸಮಾಧಾನ ಇದ್ದರೂ ಅದು ಹೊರಗೆ ಬಂದಿರಲಿಲ್ಲ, ವಿವಾದದ ಬಳಿಕ ಇಬ್ಬರ ಮುಖಾಮುಖಿಯಾಗಿರಲಿಲ್ಲ, ಆದರೆ ಐಪಿಎಲ್ 2023ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಇಬ್ಬರು ಎದುರಾಗಿದ್ದಾರೆ. ಬ್ಯಾಟಿಂಗ್ ಮಾಡಲು ಬರುವ ಮೊದಲು ಕೊಹ್ಲಿ ತಮ್ಮ ಮುಂದೆ ನಡೆದುಕೊಂಡು ಹೋದ ಗಂಗೂಲಿಯನ್ನು ತೀಕ್ಷ್ಣವಾಗಿ ನೋಡಿದ ವಿಡಿಯೋ ವೈರಲ್ ಆಗಿದೆ.
ಕೊಹ್ಲಿ ಡಗೌಟ್ನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಗಂಗೂಲಿ ಅವರ ಮುಂದೆ ಹಾದು ಹೋಗುತ್ತಾರೆ, ಗಂಗೂಲಿ ಕೊಹ್ಲಿಯನ್ನು ನೋಡದೆ ತಮ್ಮ ಪಾಡಿಗೆ ಹೋದರು, ಕೊಹ್ಲಿ ಮಾತ್ರ ಗಂಗೂಲಿಯನ್ನು ದಿಟ್ಟಿಸಿ ನೋಡುತ್ತಾರೆ. ನಂತರ ಬಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಕೊಹ್ಲಿಯನ್ನು ಮಾತನಾಡಿಸಿದಾಗ ಕೊಹ್ಲಿ ನಗುತ್ತಲೇ ಮಾತನಾಡಿದ್ದಾರೆ. ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಬಳಿಕ ಕೊಹ್ಲಿ ಆವೇಶದಲ್ಲಿಯೇ ಅದನ್ನು ಸಂಭ್ರಮಿಸಿದ್ದರು.

ಭಾರತ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕೊಹ್ಲಿ ನಡುವಿನ ಜಟಾಪಟಿ 2019ರಲ್ಲೇ ಆರಂಭವಾಗಿತ್ತು ಎನ್ನಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಚೇತನ್ ಶರ್ಮಾ ಕುಟುಕು ಕಾರ್ಯಾಚರಣೆ ಬಳಿಕ ಹಲವು ವಿಚಾರಗಳು ಬಹಿರಂಗವಾಗಿದ್ದವು. ಕೊಹ್ಲಿಯನ್ನು ಗಂಗೂಲಿ ದ್ವೇಷಿಸುತ್ತಿದ್ದರು, ಎಂದು ಚೇತನ್ ಶರ್ಮಾ ಆರೋಪಿಸಿದ್ದರು.
ವಿರಾಟ್ ಕೊಹ್ಲಿಯನ್ನು ಭಾರತ ತಂಡದ ನಾಯಕತ್ವದಿಂದ ಕೆಳಗಿಳಿಯಲು ಗಂಗೂಲಿ ಕಾರಣ ಎಂದು ಚೇತನ್ ಶರ್ಮಾ ಹೇಳಿದ್ದರು. ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದೇ ಕೊಹ್ಲಿಯನ್ನು ಕೆಳಗಿಳಿಸಲು ಎಂದು ಚೇತನ್ ಶರ್ಮಾ ಬಹಿರಂಗಪಡಿಸಿದ್ದರು. ಈ ಬಗ್ಗೆ ಕೊಹ್ಲಿಯಾಗಲೀ ಅಥವಾ ಗಂಗೂಲಿಯಾಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.