
ವಿಶಾಖಪಟ್ಟಣ, ಮೇ 7: ವಿಶಾಖಪಟ್ಟಣದಲ್ಲಿ ನಡೆದಿರುವ ಗ್ಯಾಸ್ ಲೀಕ್ ದುರಂತಕ್ಕೆ, ಅಲ್ಲಿ ಉಂಟಾಗಿರುವ ಸಾವು ನೋವಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದಾರೆ. ಮಂಗಳವಾರ (ಮೇ 5) ಮುಂಜಾನೆ ಈ ದುರಂತ ನಡೆದಿತ್ತು. ಇದರಲ್ಲಿ 9ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ, ಸಾವಿರಾರು ಮಂದಿ ಅಸ್ವಸ್ಥಗೊಂಡಿದ್ದಾರೆ.
ವಿಶಾಖಪಟ್ಟಣಂ ಹೊರವಲಯದ ಆರ್ಆರ್ ವೆಂಕಟಾಪುರಂ ಬಳಿಯ ಎಲ್ಜಿ ಪಾಲಿಮರ್ಸ್ ಎಂಬ ದಕ್ಷಿಣ ಕೊರಿಯಾ ಮೂಲದ ಮಲ್ಟಿ ನ್ಯಾಷನಲ್ ಕಾರ್ಪೊರೇಶನ್ (ಎಂಎನ್ಸಿ) ಕಂಪೆನಿಯ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದೆ. ವಿಷಾನಿಲವಾದ ಸ್ಟಿರಿನ್ (Styrene) ಗ್ಯಾಸ್ ಸೋರಿಕೆಯಾಗಿ ಜನ ಅಸ್ವಸ್ಥಗೊಂಡಿದ್ದಾರೆ.
ಕೊರೊನಾ ಆತಂಕದ ಮಧ್ಯೆ ಸಂಭವಿಸಿರುವ ಈ ದುರಂತಕ್ಕೆ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ಶಿಖರ್ ಧವನ್, ಶಟ್ಲರ್ ಪಿವಿ ಸಿಂಧು ಸಂತಾಪ ಸೂಚಿಸಿದ್ದಾರೆ. ಭಾರತದ ಈ ಎಲ್ಲಾ ಕ್ರೀಡಾಪಟುಗಳು ಟ್ವೀಟ್ ಮೂಲಕ ಬೇಸರ ತೋರಿಕೊಂಡಿದ್ದಾರೆ.
'ವಿಶಾಖಪಟ್ಟಣ ಗ್ಯಾಸ್ ಲೀಕ್ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳಿಗೆ ನನ್ನ ಸಂತಾಪಗಳು. ವಿಷಾನಿಲದಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಎಲ್ಲರೂ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.