ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇಂದಿನಿಂದ ಚಾಲನೆ ಸಿಕ್ಕಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಅಕ್ಟೋಬರ್ 8ರಂದು ಭಾರತ ವಿಶ್ವಕಪ್ನಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಭಾರತ ತಂಡ ಈಗಾಗಲೇ ಚೆನ್ನೈನಲ್ಲಿದ್ದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗುರುವಾರ ಭಾರತ ತಂಡ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಭಾರತ ತಂಡ ವಿಶ್ವಕಪ್ಗೆ ಮುನ್ನ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಬೇಕಿತ್ತಾದರೂ, ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು.

ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ರದ್ದಾದ ಬಳಿಕ ತುರ್ತು ಕೆಲಸಕ್ಕಾಗಿ ವಿರಾಟ್ ಕೊಹ್ಲಿ ಎರಡನೇ ಅಭ್ಯಾಸ ಪಂದ್ಯದ ಮುನ್ನ ಮುಂಬೈಗೆ ಪ್ರಯಾಣಿಸಿದ್ದರು. ತಿರುವನಂಪುರದಲ್ಲಿ ನಡೆಯಬೇಕಿದ್ದ ಎರಡನೇ ಅಭ್ಯಾಸ ಪಂದ್ಯ ಕೂಡ ಮಳೆಯಿಂದ ರದ್ದಾಗಿತ್ತು. ಕೊಹ್ಲಿ ತಿರುವನಂತಪುರಕ್ಕೆ ಪ್ರಯಾಣಿಸಿ ತಂಡದ ಫೋಟೊಶೂಟ್ನಲ್ಲಿ ಭಾಗವಹಿಸಿದ ಬಳಿಕ ತಂಡದ ಜೊತೆ ಚೆನ್ನೈಗೆ ಪ್ರಯಾಣಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಕೊಹ್ಲಿ, ಮೂರನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ಅಭ್ಯಾಸ ಪಂದ್ಯಗಳು ನಡೆಯದ ಕಾರಣ, ಅಭ್ಯಾಸದಲ್ಲಿ ಕೊಹ್ಲಿ ಭಾಗವಹಿಸದ ಕಾರಣ ಈಗ ಹೆಚ್ಚಿನ ಸಮಯವನ್ನು ಅಭ್ಯಾಸಕ್ಕೆ ಮೀಸಲಿಟ್ಟಿದ್ದಾರೆ.
ಗುರುವಾರ ಅವರು ಎರಡು ಗಂಟೆಗಳ ಬ್ಯಾಟಿಂಗ್ ಅಭ್ಯಾಸದ ಸಮಯವನ್ನು 2 ಗಂಟೆ 45 ನಿಮಿಷಗಳಿಗೆ ಹೆಚ್ಚಿಸಿಕೊಂಡರು. ಕೆಲವು ಸ್ಥಳೀಯ ನೆಟ್ ಬೌಲರ್ಗಳನ್ನು ಎದುರಿಸುವ ಮೊದಲು, ಕೊಹ್ಲಿ ಸಾಂಪ್ರದಾಯಿಕ ಥ್ರೋ-ಇನ್ಗಳನ್ನು ಆಡುವ ಮೂಲಕ ಗಮನ ಸೆಳೆದರು.
ವಿರಾಟ್ ಕೊಹ್ಲಿ ಜೊತೆಗೆ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಮತ್ತು ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ನೆಟ್ನಲ್ಲಿ ಶ್ರಮಿಸಿದರು. ರವೀಂದ್ರ ಜಡೇಜಾ ಮೊದಲು ಬೌಲಿಂಗ್ ಅಭ್ಯಾಸ ಮಾಡಿ ನಂತರ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಕುಲದೀಪ್ ಮತ್ತು ಪಾಂಡ್ಯ ಕೂಡ ಮೊದಲು ಬೌಲಿಂಗ್ ಅಭ್ಯಾಸ ಮಾಡಿ ನಂತರ ಚುಟುಕಾಗಿ ಬ್ಯಾಟಿಂಗ್ ಅಭ್ಯಾಸ ಮಾಡಿದರು.
ಎರಡೂ ಅಭ್ಯಾಸ ಪಂದ್ಯಗಳನ್ನು ಕಳೆದುಕೊಂಡಿರುವ ಕಾರಣ ಮೊದಲ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಕುತೂಹಲ ಕಾಡುತ್ತಿದೆ. ತಂಡದ ಎಲ್ಲಾ ಆಟಗಾರರು ಉತ್ತಮ ಫಾರ್ಮ್ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಚೆನ್ನೈನಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯುತ್ತಾರ ಅಥವಾ ಮೊಹಮ್ಮದ್ ಶಮಿಯನ್ನು ಆಡಿಸುತ್ತಾರ ಎನ್ನುವ ಕುತೂಹಲ ಇದೆ. ಹಾರ್ದಿಕ್ ಪಾಂಡ್ಯ ಪ್ರತಿ ಪಂದ್ಯದಲ್ಲಿ ಸರಾಸರಿ 6-7 ಓವರ್ಗಳನ್ನು ಬೌಲ್ ಮಾಡುತ್ತಾರೆ ಅನಿವಾರ್ಯ ಆದಾಗ ಅವರು 10 ಓವರ್ ಬೌಲಿಂಗ್ ಮಾಡಿದರೆ, ಅಶ್ವಿನ್ ತಂಡದಲ್ಲಿ ಆಡುವುದು ಖಚಿತವಾಗಲಿದೆ.