ಟೀಮ್ ಇಂಡಿಯಾ, ಶ್ರೀಲಂಕಾ ಪ್ರವಾಸವನ್ನು ಮುಗಿಸಿ ಭಾರತದತ್ತ ಮುಖ ಮಾಡಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟಂಬರ್ 19 ರಂದು ಅಂಗಳಕ್ಕೆ ಇಳಿಯಲಿದೆ. ಅಲ್ಲಿಯ ವರೆಗೆ ಟೀಮ್ ಇಂಡಿಯಾ ಆಟಗಾರರಿಗೆ ವಿಶ್ರಾಂತಿ. ಆದರೆ ಈ ಸಮಯದಲ್ಲಿ ಬ್ಯಾಟಿಂಗ್ ಲಯ ತಪ್ಪ ಬಾರದು ಎಂದು ಹಲವು ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡಲು ಮುಂದಾಗಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಸಹ ಆಟಗಾರರಿಗೆ ದೇಶೀಯ ಟೂರ್ನಿಯಲ್ಲಿ ಆಡುವಂತೆ ಸೂಚಿಸಿದೆ. ಇದಕ್ಕೆ ಹಲವು ಆಟಗಾರರು ಸಹ ಒಪ್ಪಿಗೆ ನೀಡಿದ್ದಾರೆ. ಈಗ ಬಹು ವರ್ಷಗಳ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ಸ್ ಮತ್ತೆ ದೇಶೀಯ ಟೂರ್ನಿಯಲ್ಲಿ ಅಂಗಳಕ್ಕೆ ಪ್ರವೇಶಿಸುತ್ತಿದ್ದಾರೆ. ಸೋಮವಾರದ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಸಹ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತ್ತು.

ದುಲೀಪ್ ಟ್ರೋಫಿ ಸೆಪ್ಟೆಂಬರ್ 5 ಮತ್ತು ಸೆಪ್ಟೆಂಬರ್ 22 ರ ನಡುವೆ ನಡೆಯಲಿದ್ದು, ಇದರಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಶುಭಮನ್ ಗಿಲ್ ದೇಶೀಯ ಟೂರ್ನಿಯಲ್ಲಿ ಆಡಲಿದ್ದಾರೆ. ಟೀಮ್ ಇಂಡಿಯಾದ ಹಿರಿಯ ಆಟಗಾರರು ಸಹ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಆದರೆ ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯಂತೆ, ವಿರಾಟ್ ಹಾಗೂ ರೋಹಿತ್ ದುಲೀಪ್ ಟ್ರೋಫಿಯಲ್ಲಿ ಆಡುತ್ತಿಲ್ಲ.
ಒಂದು ವೇಳೆ ಈ ಇಬ್ಬರು ದೇಶೀಯ ಟೂರ್ನಿಯಲ್ಲಿ ಆಡದೇ ಇದ್ದಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯ ವರೆಗೆ ಲಾಂಗ್ ಬ್ರೇಕ್ ನಲ್ಲಿ ಇರುತ್ತಾರೆ. ದುಲೀಪ್ ಟ್ರೋಫಿಯಲ್ಲಿ ರಾಹುಲ್, ಪಂತ್, ಗಿಲ್, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ರಜತ್ ಪಾಟಿದಾರ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಇನ್ನು ಕಳೆದ ವರ್ಷ ಕೇಂದ್ರ ಒಪ್ಪಂದಿಂದ ಹೊರಗುಳಿದಿದ್ದ ಇಶಾಂತ್ ಕಿಶನ್ ಸಹ ಈ ಟೂರ್ನಿಯಲ್ಲಿ ಬ್ಯಾಟ್ ಬೀಸಲಿದ್ದಾರೆ. ಸೆಪ್ಟಂಬರ್ 5 ರಿಂದ ಟೂರ್ನಿ ಆರಂಭವಾಗಲಿದ್ದು, ನಾಲ್ಕು ತಂಡಗಳು ಮುಖಾಮುಖಿ ಆಗಲಿವೆ.
ಈ ಬೆನ್ನಲ್ಲೆ ವಿರಾಟ್ ಕೊಹ್ಲಿ ಅವರ ಹಳೆ ಟ್ವೀಟ್ ಒಂದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸೋಮವಾರ ವಿರಾಟ್, ರೋಹಿತ್ ಇಬ್ಬರೂ ದುಲೀಪ್ ಟ್ರೋಫಿ ಆಡಲಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ ವಿರಾಟ್ ಅವರ ಹಳೆಯ ಟ್ವೀಟ್ ಸಖತ್ ವೈರಲ್ ಆಗಿತ್ತು. ಕೊಹ್ಲಿ 25 ಜನವರಿ 2010 ರಂದು ಟ್ವೀಟ್ ಮಾಡಿದ್ದರು ಮತ್ತು ದುಲೀಪ್ ಟ್ರೋಫಿಗಾಗಿ ಅಭಿಮಾನಿಗಳಿಂದ ಶುಭ ಹಾರೈಕೆ ಬಯಸಿದ್ದರು. ಈ ಟ್ವೀಟ್ಗೆ ಈಗ ಅಭಿಮಾನಿಗಳು ಸಖತ್ ಕಮೆಂಟ್ ಹಾಗೂ ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೆ ದೇಶೀಯ ಟೂರ್ನಿಗಳಲ್ಲಿ ಆಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಸೋಮವಾರದ ವರದಿಯ ಪ್ರಕಾರ ವಿರಾಟ್, ದುಲೀಪ್ ಟ್ರೋಫಿಯಲ್ಲಿ ಆಡಬಹುದು ಎಂದು ಅಭಿಮಾನಿಗಳು ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದಲೇ ಇವರು ಮೈದಾನ ಪ್ರವೇಶಿಸಲಿದ್ದಾರೆ.