14ನೇ ವಯಸ್ಸಿನಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡುವ ಮೂಲಕ ವೈಭವ್ ಸೂರ್ಯವಂಶಿ ದಾಖಲೆ ಸೃಷ್ಟಿಸಿದರು. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಕೋಟ್ಯಾಧಿಪತಿಯಾದರು. ಅವರು ತಮ್ಮ ಚೊಚ್ಚಲ ಪಂದ್ಯವನ್ನು ಸಿಕ್ಸರ್ನೊಂದಿಗೆ ಪ್ರಾರಂಭಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದರು. ಎಲ್ಲೆಡೆ ವೈಭವ್ ಅವರ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಎರಡನೇ ಪಂದ್ಯದಲ್ಲಿ ಅವರ ಬ್ಯಾಟ್ ಸದ್ದು ಮಾಡಲಿಲ್ಲ.
ವೈಭವ್ ಸೂರ್ಯವಂಶಿ ತಮ್ಮ ಚೊಚ್ಚಲ ಪಂದ್ಯದಲ್ಲಿ 34 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದರು. ಅವರು ತಮ್ಮ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎರಡನೇ ಪಂದ್ಯದಲ್ಲೂ ಆತುರದಿಂದಾಗಿ ವೈಭವ್ ಕೇವಲ 16 ರನ್ಗಳಿಗೆ ವಿಕೆಟ್ ಕಳೆದುಕೊಂಡರು. ಇದಾದ ನಂತರ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್, ಅವರಿಗೆ ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದಾರೆ.

ಐಪಿಎಲ್ನಲ್ಲಿ ದೀರ್ಘ ಭವಿಷ್ಯಕ್ಕಾಗಿ ವೈಭವ್ ಸೂರ್ಯವಂಶಿ ಅವರಿಗೆ ವೀರೇಂದ್ರ ಸೆಹ್ವಾಗ್ ಮೂಲ ಮಂತ್ರದ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ, ಸೂರ್ಯವಂಶಿಗೆ ಸೆಹ್ವಾಗ್ ವಿರಾಟ್ ಕೊಹ್ಲಿಯ ಉದಾಹರಣೆ ನೀಡಿದ್ದಾರೆ.
"ಸೂರ್ಯವಂಶಿ 20 ವರ್ಷಗಳ ಕಾಲ ಐಪಿಎಲ್ನಲ್ಲಿ ಆಡುವ ಗುರಿಯನ್ನು ಹೊಂದಬೇಕು. ವಿರಾಟ್ ಕೊಹ್ಲಿಯನ್ನ ನೋಡಿ, ಅವರು 19ನೇ ವಯಸ್ಸಿನಲ್ಲಿ ಆಡಲು ಪ್ರಾರಂಭಿಸಿದರು. ಈಗ ಅವರು 18 ಸೀಸನ್ಗಳನ್ನೂ ಆಡಿದ್ದಾರೆ. ಇದನ್ನೇ ಅವರು ಮಾಡಲು ಪ್ರಯತ್ನಿಸಬೇಕು. ಈ ಐಪಿಎಲ್ನಲ್ಲಿ ಅವರು ಸಂತೋಷವಾಗಿದ್ದರೆ, ಅವರು ಈಗ ಕೋಟ್ಯಾಧಿಪತಿ ಎಂದು ಭಾವಿಸಿದ್ದರೆ, ಬಹುಶಃ ಮುಂದಿನ ವರ್ಷ ನಾವು ಅವರನ್ನು ನೋಡದೇ ಇರಬಹುದು. ಅವರ ಚೊಚ್ಚಲ ಪಂದ್ಯ ಅದ್ಭುತವಾಗಿತ್ತು. ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದರು. ಇದನ್ನೇ ಮುಂದುವರೆಸಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.
ಗುರವಾರ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ರಾಜಸ್ಥಾನಕ್ಕೆ 206 ರನ್ಗಳ ಗುರಿಯನ್ನು ನೀಡಿತ್ತು. ವೈಭವ್ ಮತ್ತು ಜೈಸ್ವಾಲ್ ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ವೈಭವ್ ಕೇವಲ 16 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಜೈಸ್ವಾಲ್ ಕೇವಲ 1 ರನ್ ಯಿಂದ ಅರ್ಧಶತಕ ವಂಚಿತರಾದರು. ನಂತರ, ಧ್ರುವ್ ಜುರೆಲ್ ಕ್ರೀಸ್ಗೆ ಬಂದು 47 ರನ್ಗಳ ಇನ್ನಿಂಗ್ಸ್ನೊಂದಿಗೆ ಪಂದ್ಯಕ್ಕೆ ಜೀವ ತುಂಬಿದರು. ಆದರೆ ಜೋಶ್ ಹೇಜಲ್ವುಡ್ ನಾಲ್ಕು ವಿಕೆಟ್ಗಳನ್ನು ಪಡೆಯುವ ಮೂಲಕ ಆರ್ಸಿಬಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಈ ಪಂದ್ಯವನ್ನು ಆರ್ಸಿಬಿ 11 ರನ್ಗಳಿಂದ ಗೆದ್ದುಕೊಂಡಿತು.