ಗುರುವಾರ ಹರಿಯಾಣದಲ್ಲಿ 2024ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಕಸರತ್ತು ನಡೆಸುತ್ತಿದ್ದು, ಕೊನೆಯ ದಿನದಲ್ಲಿ ಸಂಪೂರ್ಣ ಶಕ್ತಿ ಪ್ರದರ್ಶನ ಮಾಡಿವೆ. ಇದೀಗ ಹರಿಯಾಣ ಚುನಾವಣಾ ಅಖಾಡಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಎಂಟ್ರಿ ಕೊಟ್ಟಿದ್ದಾರೆ.
ಹರಿಯಾಣದ ತೋಷಮ್ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಅನಿರುದ್ಧ್ ಚೌಧರಿ ಪರ ವೀರೇಂದ್ರ ಸೆಹ್ವಾಗ್ ಮತ ಯಾಚಿಸಿದ್ದಾರೆ. ಈ ಮೂಲಕ ಸೆಹ್ವಾಗ್ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಚ್ಚರಿಯೆಂದರೆ ಸೆಹ್ವಾಗ್ಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಬಹಳ ಇಷ್ಟ. ಅವರು ತಮ್ಮ ಇನ್ಸ್ಟಾಗ್ರಾಮ್ ಮತ್ತು ಟ್ವೀಟರ್(ಎಕ್ಸ್) ಗಳಲ್ಲಿ ಹಿಂದೂ ಧರ್ಮ ಮತ್ತು ಬಿಜೆಪಿಗೆ ಬೆಂಬಲವಾಗಿ ಹಲವಾರು ಬಾರಿ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ಮಾತನಾಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿರುವುದು ಎಲ್ಲರಿಗೆ ಅಚ್ಚರಿ ತಂದಿದೆ.

ಈ ಹಿಂದೆ 2019ರ ಲೋಕಸಭೆ ಚುನಾವಣೆಯಲ್ಲಿ ಟೀಮ್ ಇಂಡಿಯಾ ಹಾಲಿ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಸಂಸದರಾಗಿದ್ದರು. ಈ ವೇಳೆ ತನ್ನ ಸ್ನೇಹಿತ ಗಂಭೀರ್ ನನ್ನು ಸ್ವೆಹಾಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಬೆಂಬಲಿಸಿದ್ದರು. ಜೊತೆಗೆ ಹರಿಯಾಣದ ರೋಹ್ಟಕ್ ಲೋಕಸಭಾ ಕ್ಷೇತ್ರದಿಂದ ಸೆಹ್ವಾಗ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಡಿದ್ದವು. ಆದರೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.
ಹರಿಯಾಣದ ತೋಷಮ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅನಿರುದ್ಧ್ ಚೌಧರಿ ಈ ಹಿಂದೆ ಬಿಸಿಸಿಐ ಖಜಾಂಚಿಯಾಗಿದ್ದರು. 2011ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅವರು ಮ್ಯಾನೇಜರ್ ಆಗಿದ್ದರು. ಇದಕ್ಕೂ ಮೊದಲು ಅವರು ಇಂಗ್ಲೆಂಡ್ನಲ್ಲಿ ನಡೆದ 2009ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಸೆಹ್ವಾಗ್ ಮತ್ತು ಅನಿವೃದ್ಧ್ ಚೌಧರಿ ನಡುವೆ ಉತ್ತಮ ಸಂಬಂಧವಿದೆ. ಪ್ರಚಾರದ ವೇಳೆ ಮಾತನಾಡಿರುವ ಸೆಹ್ವಾಗ್, 'ಈ ಹಿಂದೆ ಅನಿರುದ್ಧ್ ಮತ್ತು ಅವರ ತಂದೆ ತನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಹಾಗಾಗಿ ನಾನು ಈ ವೇಳೆ ಅವರಿಗೆ ಸಹಾಯ ಮಾಡಲು ಬಂದಿದ್ದೇನೆ. ಅನಿರುದ್ಧ್ ಚೌಧರಿ ಅವರಿಗೆ ಹೆಚ್ಚಿನ ಮತತ ಹಾಕುವ ಮೂಲಕ ಗೆಲ್ಲಿಸಬೇಕೆಂದು ತೋಷಮ್ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.
ಅನಿರುದ್ಧ್ ಅವರ ತಂದೆ ರಣಬೀರ್ ಮಹೇಂದ್ರ ಅವರು 2004 ರಿಂದ 2005 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಅನಿರುದ್ಧ್ ಅವರ ತಾತ ಬನ್ಸಿ ಲಾಲ್ ಹರಿಯಾಣದ ಮುಖ್ಯಮಂತ್ರಿಯಾಗಿಯೂ ಆಗಿ ಅಧಿಕಾರ ನಡೆಸಿದ್ದಾರೆ. ಬನ್ಸಿ ಲಾಲ್ ಅವರ ಕಿರಿಯ ಪುತ್ರ ಸುರೇಂದರ್ ಸಿಂಗ್ ಅವರ ಪುತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಶ್ರುತಿ ಚೌಧರಿ ವಿರುದ್ಧ ಅನಿವೃದ್ಧ್ ಚೌಧರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸಂಬಂಧದಲ್ಲಿ ಶ್ರುತಿ ಮತ್ತು ಅನಿವೃದ್ದ್ ಇಬ್ಬರು ಅಣ್ಣ-ತಂಗಿ ಆಗಿದ್ದಾರೆ.