ಬೆಂಗಳೂರು, ಆಗಸ್ಟ್, 16: ಭಾರತ ಕಂಡ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಶತಕ ತಪ್ಪಿಸಲು ನೆರೆಮನೆಯ ಶ್ರೀಲಂಕಾದವರು ಬೇಕಂತಲೇ ನೋಬಾಲ್ ಎಸೆದು ಇಂದಿಗೆ ಸರಿಯಾಗಿ ಆರು ವರ್ಷ. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಟ್ವೀಟ್ ಮಾಡಿ ಈ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 46.1 ಓವರ್ ಗಳಲ್ಲಿ ಕೇವಲ 170 ರನ್ ಗೆ ಆಲೌಟ್ ಆಗಿತ್ತು.ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸೆಹ್ವಾಗ್ ನೆರವು ನೀಡಿದ್ದರು. ಸೆಹ್ವಾಗ್ ರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಕೇವಲ 10 ರನ್ ಗಳಿಸಿ ಔಟಾದರು. ನಂತರ ಬಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೊನ್ನೆ ಸುತ್ತಿದ್ದರು.['ಸಿಕ್ಸರ್' ಬಾರಿಸಿ ಧೋನಿ ದಾಖಲೆ ಪುಡಿ ಮಾಡಿದ ಸೆಹ್ವಾಗ್]

ಆದರೆ ಸುರೇಶ್ ರೈನಾ ಮತ್ತು ನಾಯಕ ಎಂಎಸ್ ಧೋನಿ ಆಧಾರವಾಗಿ ನಿಂತರು. ಇನ್ನೊಂದೆಡೆ ಸೆಹ್ವಾಗ್ ಬ್ಯಾಟ್ ಬೀಸುತ್ತಲೇ ಇದ್ದರು. 35.3 ಓವರ್ ನಲ್ಲಿ ಭಾರತ ತಂಡದ ಮೊತ್ತ ಶ್ರೀಲಂಕಾದ ಮೊತ್ತಕ್ಕೆ ಸಮನಾಗಿತ್ತು.
ವಿರೇಂದ್ರ ಸೆಹ್ವಾಗ್ 99 ರನ್ ಗಳಿಸಿ ಕ್ರೀಸ್ ನಲ್ಲಿ ಇದ್ದರು. ಈ ಸಂದರ್ಭದಲ್ಲಿ ಬೌಲರ್ ಸೂರಜ್ ರಣದೀವ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದರು. ನಿಯಮದ ಪ್ರಕಾರ ತಂಡಗಳ ಮೊತ್ತ ಸಮಗೊಂಡಾಗ ನೋಬಾಲ್ ಅಥವಾ ವೈಡ್ ಎಸೆದರೆ ಬ್ಯಾಟ್ಸ್ ಮನ್ ಬಾರಿಸಿದ ರನ್ ಲೆಕ್ಕಕ್ಕೆ ಬರುವುದಿಲ್ಲ. ಹಾಗಾಗಿ ಈ ನೋಬಾಲ್ ಗೆ ಸೆಹ್ವಾಗ್ ಸಿಕ್ಸರ್ ಸಿಡಿಸಿದರೂ ಅವರು 99 ರನ್ ಗಳಿಸಿ ನಾಟೌಟ್ ಆಗಿ ಉಳಿಯಬೇಕಾಯಿತು.[ದೀಪಾ ಹಾಗೂ ಲಲಿತಾಗೆ ದೊಡ್ಡ ಸನ್ಮಾನ ಸಿಗಬೇಕು: ಸೆಹ್ವಾಗ್]
ನಂತರ ಘಟನೆಯ ಹೊಣೆ ಹೊತ್ತು ಶ್ರೀಲಂಕಾ ತಂಡದ ನಾಯಕರಾಗಿದ್ದ ಕುಮಾರ ಸಂಗಾಕ್ಕಾರ್ ಕೊನೆಗೂ ಕ್ಷಮೆಯಾಚಿಸಿದ್ದರು. ಆದರೆ ಇದೆಲ್ಲವನ್ನು ಮುಕ್ತವಾಗಿ ಸ್ವೀಕರಿಸಿದ್ದ ವೀರೇಂದ್ರ ಸೆಹ್ವಾಗ್ ಬೋನಸ್ ಅಂಕದೊಂದಿಗೆ ಜಯಗಳಿಸಲು ಸಾಧ್ಯವಾಗಿದ್ದೇ ನಮಗೆ ಸಂತಸ ತಂದಿದೆ ಎಂದು ಹೇಳಿ ವಿವಾದಕ್ಕೆ ಅವಕಾಶ ಇಲ್ಲದಂತೆ ಮಾಡಿದ್ದರು.