
ನವದೆಹಲಿ, ಜುಲೈ 24: ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅಂದರೆ ಪಕ್ಕನೆ ನೆನಪಿಗೆ ಬರೋದೇ ಅವರ ದಿಟ್ಟ ಬ್ಯಾಟಿಂಗ್. ಬ್ಯಾಟಿಂಗ್ಗೆ ಬಂದವರೇ ಸಿಕ್ಸ್, ಫೋರ್ ಚಚ್ಚುವ ಮೂಲಕ ಆಟ ಶುರು ಮಾಡೋ ವಿಭಿನ್ನ ಸ್ಟೈಲ್ ಅವರದ್ದು. ಇದೇ ಕಾರಣಕ್ಕೆ ಸೆಹ್ವಾಗ್ ಆಟ ಹೆಚ್ಚು ಇಷ್ಟವಾಗುತ್ತಿತ್ತು.
ಬ್ಯಾಟಿಂಗ್ಗೆ ಬರುವ ಆಟಗಾರ ಕೊಂಚ ಕಾಲ ಕ್ರೀಸ್ನಲ್ಲಿ ಗಟ್ಟಿಯಾಗಲು ಯತ್ನಿಸುತ್ತಾನೆಯೇ ಹೊರತು ಬಂದ ಕೂಡಲೇ ದೊಡ್ಡ ಹೊಡೆತಗಳಿಗೆ ಕೈ ಹಾಕಲು ಹಿಂಜರಿಯುತ್ತಾನೆ. ಆದರೆ ಸೆಹ್ವಾಗ್ ವಿಚಾರದಲ್ಲಿ ಹೀಗಿರಲಿಲ್ಲ. ಆರಂಭಿಕ ಎಸೆತಗಳಿಗೆ ಸಿಕ್ಸ್/ಫೋರ್ ಚಚ್ಚಿಯೇ ವೀರೂ ಆಟ ಶುರು ಮಾಡುತ್ತಿದ್ದರು.
ವೀರೇಂದ್ರ ಸೆಹ್ವಾಗ್ ಅವರ ಈ ದಿಟ್ಟ ಬ್ಯಾಟಿಂಗ್ಗೆ ಕಾರಣವೇನೆಂದು ಕಿಂಗ್ಸ್ XI ಪಂಜಾಬ್ನ ಮಾಜಿ ತಾಂತ್ರಿಕ ಕೋಚ್ ಶಯಮಾಲ್ ವಲ್ಲಭ್ಜೀ ಹೇಳಿಕೊಂಡಿದ್ದಾರೆ. ಸೆಹ್ವಾಗ್ ಅವರ ಗಟ್ಟಿ ಮನಸ್ಸೇ ಅವರ ಯಶಸ್ಸಿಗೆ ಕಾರಣ ಎಂದು ವಲ್ಲಭ್ಜೀ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ವಲ್ಲಭ್ಜೀ 'ಸೆಹ್ವಾಗ್ ಬಿಲಿಯನ್ನಲ್ಲಿ ಒಬ್ಬರು. ಅವರ ಮಾನಸಿಕತೆಯೇ ಅವರ ಯಶಸ್ಸಿಗೆ ಕಾರಣ, ಬಹುಶಃ ಇದು ಅವರಿಗೂ ಗೊತ್ತಿರಲಿಕ್ಕಿಲ್ಲ. ಸೆಹ್ವಾಗ್ ಒಂದು ಚೆಂಡನ್ನು ನೋಡುತ್ತಾರೆ ಮತ್ತು ಅದಕ್ಕೆ ಬಾರಿಸುತ್ತಾರೆ. ಎಲ್ಲರೂ ಇಷ್ಟು ಪ್ರತಿಭಾವಂತರಾಗಿರೋಲ್ಲ,' ಎಂದರು.
'ನಾನೊಬ್ಬ ಕೋಚ್ ಮತ್ತು ಮೆಂಟರ್ ಆಗಿ ಹೇಳುವುದಾದರೆ, ಪ್ರತಿಯೊಬ್ಬರೂ ಅವನಂತೆ ಪ್ರತಿಭಾವಂತರು ಎಂದು ಆತ ತಿಳಿದಿರುವುದಿಲ್ಲ. ಈ ಪ್ರಕ್ರಿಯೆ ಕೆಲವರಿಗೆ ಇನ್ನೂ ಕ್ಲಿಷ್ಟಕರ ಅನ್ನಿಸುತ್ತದೆ. ಸೆಹ್ವಾಗ್ ವಿಚಾರದಲ್ಲಿ ಇದು ಸಕಾರಾತ್ಮಕವಾಗಿ ಕೆಲಸ ಮಾಡಿದೆ,' ಎಂದು ವಲ್ಲಭ್ಜೀ ವಿವರಿಸಿದರು.