
ಗುರುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಆರ್ಸಿಬಿ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಅವರನ್ನು ಕಣಕ್ಕಿಳಿಸಬೇಕು ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕ್ರಿಸ್ ಗೇಲ್ ಈ ಬಾರಿಯ ಟೂರ್ನಿಯಲ್ಲಿ ಒಂದು ಪಂದ್ಯದಲ್ಲೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಬಳಿಕ ಗೇಲ್ ಫುಡ್ ಪಾಯ್ಸನ್ಗೆ ತುತ್ತಾಗಿ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈಗ ಸಂಪೂರ್ಣವಾಗಿ ಚೇತರಿಕೆಯನ್ನು ಕಂಡಿದ್ದು ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆರಂಭಿಕರಾಗಿ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಗೇಲ್ ಆಗಮನದಿಂದಾಗಿ ಈ ಜೋಡಿ ಬೇರ್ಪಡುವ ಸಂದರ್ಭ ಉಂಟಾಗಲಿದೆ. ಇದಕ್ಕಾಗಿ ವೀರೇಂದ್ರ ಸೆಹ್ವಾಗ್ ಸಲಹೆಯೊಂದನ್ನು ನೀಡಿದ್ದಾರೆ ಮಯಾಂಕ್ ಅಗರ್ವಾಲ್ ಹಾಗೂ ಗೇಲ್ ಆರಂಭಿಕರಾಗಿ ಕಣಕ್ಕಿಳಿಯಲಿ, ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿ ಎಂದು ತಿಳಿಸಿದ್ದಾರೆ.
ಕ್ರಿಸ್ ಗೇಲ್ ತಮ್ಮ ಮಾಜಿ ಫ್ರಾಂಚೈಸಿ ಆರ್ಸಿಬಿ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಸಣ್ಣ ಬೌಂಡರಿ ಗೆರೆಗಳನ್ನು ಹೊಂದಿರುವ ಶಾರ್ಜಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಗೇಲ್ ಅಬ್ಬರಿಸಲು ಸಹಕಾರಿಯಾಗಲಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
"ಆರ್ಸಿಬಿ ವಿರುದ್ಧ ಗೇಲ್ ದಾಖಲೆ ಅದ್ಭುತವಾಗಿದೆ. 54ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಗೇಲ್ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನಿಂಗ್ಸ್ ಆರಂಭಿಸಲು ಗೇಲ್ ಅವರನ್ನು ಸೀರಿಯಸ್ ಮ್ಯಾನ್ ಮಯಾಂಕ್ ಅಗರ್ವಾಲ್ ಜೊತೆಗೆ ಬಿಡಿ. ಮೂರನೇ ಕ್ರಮಾಂಕದಲ್ಲಿ ಕೆಎಲ್ ಬ್ಯಾಟಿಂಗ್ಗೆ ಇಳಿದು ತಂಡದ ಸಮತೋಲನವನ್ನು ಕಾಪಾಡಿಕೊಳ್ಳಲಿ" ಎಂದು ಸೆಹ್ವಾಗ್ ತಮ್ಮ ಶೈಲಿಯಲ್ಲಿ ಸಲಹೆಯನ್ನು ನೀಡಿದ್ದಾರೆ.