ಬುಧವಾರ, ಅಕ್ಟೋಬರ್ 11ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ನ ತಮ್ಮ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಎಂಟು ವಿಕೆಟ್ಗಳ ಗೆಲುವು ಸಾಧಿಸಿತು.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು 84 ಎಸೆತಗಳಲ್ಲಿ 16 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 131 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದರು.

ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ತಮ್ಮ 7ನೇ ಶತಕವನ್ನು ಗಳಿಸಿದರು ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ, ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಈ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ವೆಸ್ಟ್ ಇಂಡೀಸ್ ಲೆಜೆಂಡ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ದಾಖಲೆಯನ್ನು ಅಳಿಸಿ ಹಾಕಿದರು.
ಇದೀಗ 2011ರ ವಿಶ್ವಕಪ್ ತಂಡದ ಆಯ್ಕೆಯಲ್ಲಿ ತನಗೇನಾದರೂ ಹೇಳಿದ್ದರೆ ರೋಹಿತ್ ಶರ್ಮಾ ಅವರನ್ನು 15 ಆಟಗಾರರ ತಂಡದಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ರೋಹಿತ್ ಶರ್ಮಾ ತಂಡದ ಭಾಗವಾಗುವುದನ್ನು ಕಳೆದುಕೊಂಡಿರುವ ಬಗ್ಗೆ ಬೇಸರಗೊಂಡಿದ್ದೆ. ಸುರೇಶ್ ರೈನಾ ಮತ್ತು ಯೂಸುಫ್ ಪಠಾಣ್ ಅವರಂತಹವರು ಅವರಿಗಿಂತ ಮುಂದೆ ಆಯ್ಕೆಯಾದರು ಎಂದರು. ಇದೇ ವೇಳೆ ಅಂದಿನ ತಂಡದ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ಬದಲಾಗಿ ಅವರನ್ನು ಆಯ್ಕೆ ಮಾಡಿಕೊಳ್ಳಲು ಕಾರಣವನ್ನು ವೀರೇಂದ್ರ ಸೆಹ್ವಾಗ್ ವಿವರಿಸಿದರು.
ಅಫ್ಘಾನಿಸ್ತಾನದ ವಿರುದ್ಧ ಭಾರತ ತಂಡದ ಭರ್ಜರಿ ಗೆಲುವಿನ ನಂತರ ಕ್ರಿಕ್ಬಜ್ನೊಂದಿಗೆ ಮಾತನಾಡಿದ ವೀರೇಂದ್ರ ಸೆಹ್ವಾಗ್ ರೋಹಿತ್ ಶರ್ಮಾ ಬಗ್ಗೆ ಹೇಳಿದ್ದು ಹೀಗಿದೆ.
"ನಾನು ಅಂದು ನಾಯಕನಾಗಿದ್ದರೆ ಅಥವಾ ಆಯ್ಕೆ ಸಮಿತಿಯಲ್ಲಿದ್ದಿದ್ದರೆ, ನಾನು ಖಂಡಿತವಾಗಿಯೂ ರೋಹಿತ್ ಶರ್ಮಾರನ್ನು 2011ರ ವಿಶ್ವಕಪ್ಗೆ ಆಯ್ಕೆ ಮಾಡುತ್ತಿದ್ದೆ. ಆದರೆ ಆ ಸಮಯದಲ್ಲಿ ಅವರು ಈಗಿರುವ ರೋಹಿತ್ ಶರ್ಮಾ ಆಗಿರಲಿಲ್ಲ. ಅವರು ಸ್ವಲ್ಪ ಚಿಕ್ಕವರಾಗಿದ್ದರು ಮತ್ತು ಅಂತಿಮವಾಗಿ, ಅವರು ಬಯಸಿದ ತಂಡದ ಸಮತೋಲನವನ್ನು ನಾಯಕ ಮತ್ತು ಆಯ್ಕೆಗಾರರು ನಿರ್ಧರಿಸುತ್ತಾರೆ," ಎಂದು ತಿಳಿಸಿದರು.

"ಬಹುಶಃ ಆ ಹೊರಗಿಡುವಿಕೆ ಅವರನ್ನು ಹೆಚ್ಚು ಸ್ಥಿರವಾಗಲು ಪ್ರೇರೇಪಿಸಿತು. ಅವರು ಮತ್ತೊಮ್ಮೆ ಎಂದೆಂದಿಗೂ ವಿಶ್ವಕಪ್ ಪಂದ್ಯಾವಳಿಯನ್ನು ಕಳೆದುಕೊಳ್ಳದಿರುವಷ್ಟು ರನ್ ಗಳಿಸಬೇಕೆಂದು ಅವರು ಅರಿತುಕೊಂಡರು," ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
"ನೀವು ವಿಶ್ವಕಪ್ಗೆ ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಆ ಸಮಯದಲ್ಲಿ ಯೂಸುಫ್ ಪಠಾಣ್ ಅವರು ಪಂದ್ಯಾವಳಿಯ ಮೊದಲು ಒಂದೆರಡು ನಿರ್ಣಾಯಕ ಇನ್ನಿಂಗ್ಸ್ಗಳನ್ನು ಆಡಿದ್ದರು. ಅದು ಅವರ ಪರವಾಗಿ ಕೆಲಸ ಮಾಡಿರಬಹುದು ಮತ್ತು ರೋಹಿತ್ ಶರ್ಮಾ ಅವರನ್ನು ಹೊರಗಿಡಬೇಕಾಯಿತು," ಎಂದು ವಿವರಿಸಿದರು.
ಅಫ್ಘಾನಿಸ್ತಾನ ವಿರುದ್ಧ ಕೇವಲ 84 ಎಸೆತಗಳಲ್ಲಿ 131 ರನ್ ಗಳಿಸಿದ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿ ಮಂತ್ರಮುಗ್ಧರಾಗಿದ್ದೆ ಎಂದು ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಹೇಳಿದರು.
"ರೋಹಿತ್ ಶರ್ಮಾ ತಮ್ಮ ಇನ್ನಿಂಗ್ಸ್ನಿಂದ ದೊಡ್ಡ ಶತಕ ಗಳಿಸುವ ಸ್ಪಷ್ಟ ಸಂದೇಶವನ್ನು ನೀಡಿದರು. ಅವರು ತಮ್ಮ ಶತಕವನ್ನು ಗಳಿಸಿದ ನಂತರ ಇನ್ನೂ 30 ರನ್ ಗಳಿಸಿದರು. ಅವರು ಈಗಾಗಲೇ ಮೂರು ದ್ವಿಶತಕ ಗಳಿಸಿದ್ದಾರೆ. ಆದ್ದರಿಂದ ಅವರು ಕ್ರೀಸ್ನಲ್ಲಿ ನೆಲೆಸಿದರೆ ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತದೆ," ಎಂದರು.
ಆರಂಭಿಕರಾಗಿ ರೋಹಿತ್ ಶರ್ಮಾ ಪ್ರಯಾಣದ ಬಗ್ಗೆ ವೀರೇಂದ್ರ ಸೆಹ್ವಾಗ್ ಮಾತು
ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಲು ರೋಹಿತ್ ಶರ್ಮಾ ಅವರ ಏರಿಕೆಯು ವೀರೇಂದ್ರ ಸೆಹ್ವಾಗ್ ನಿವೃತ್ತಿ ನಂತರ ಬಹುತೇಕ ಹೊಂದಿಕೆಯಾಯಿತು. ರೋಹಿತ್ ತಂಡದ ಬೇಡಿಕೆಗಳಿಗೆ ಹೊಂದಿಕೊಂಡ ವಿಧಾನಕ್ಕಾಗಿ ವೀರೇಂದ್ರ ಸೆಹ್ವಾಗ್ ಶ್ಲಾಘಿಸಿದರು.
ವೀರೇಂದ್ರ ಸೆಹ್ವಾಗ್ ನಿರ್ಗಮಿಸಿದ ನಂತರ, ರೋಹಿತ್ ಶರ್ಮಾ ಖಾಯಂ ಆರಂಭಿಕನಾದರು. ಬದಲಿ ಆಟಗಾರನನ್ನು ಹುಡುಕುವ ಗೋಜಿಗೆ ಹೋಗಲಿಲ್ಲ ಮತ್ತು ಎಂಎಸ್ ಧೋನಿ ಉತ್ತಮ ತಂತ್ರಗಾರಿಕೆ ಹೊಂದಿದ್ದರಿಂದ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯುವ ಜವಾಬ್ದಾರಿಯನ್ನು ರೋಹಿತ್ ಶರ್ಮಾಗೆ ವಹಿಸಿದರು.
"ರೋಹಿತ್ ಶರ್ಮಾ ಆರಂಭದಲ್ಲಿ ಸ್ವಲ್ಪ ಹಿಂಜರಿದರು ಮತ್ತು ಅಗ್ರ ಕ್ರಮಾಂಕದ ಕೆಲವು ಇನ್ನಿಂಗ್ಸ್ಗಳ ನಂತರ, ಅವರು ಮಧ್ಯಮ ಕ್ರಮಾಂಕಕ್ಕೆ ಮರಳಿದರು. ಆದರೆ ಅಂತಿಮವಾಗಿ ಅವರು ದಾರಿ ಕಂಡುಕೊಂಡರು ಮತ್ತು ಅಲ್ಲೇ ಸ್ಥಿರವಾದರು. ಈಗ ಅವರು 10,000ಕ್ಕೂ ಅಧಿಕ ರನ್ ಮತ್ತು 30ಕ್ಕೂ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ್ದಾರೆ. ಹೀಗಾಗಿ ಅವರು ಖಂಡಿತವಾಗಿ ತಂಡದ ಬಲವಾದ ಆಧಾರಸ್ತಂಭವಾಗಿದ್ದಾರೆ,'' ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದರು.