
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ. ಟೆಸ್ಟ್ ಸರಣಿಯನ್ನು ಗೆದ್ದಿರುವ ಭಾರತ ತಂಡ ಟಿ20 ಸರಣಿಯಲ್ಲೂ ಭರ್ಜರಿ ಪ್ರದರ್ಶನ ನೀಡಲು ಸಿದ್ಧತೆಯನ್ನು ನಡೆಸುತ್ತಿದೆ. ಇನ್ನು ಈ ಸರಣಿಯಲ್ಲಿ ಭಾರತದ ಆಟಗಾರರ ಆಯ್ಕೆ ಮ್ಯಾನೇಜ್ಮೆಂಟ್ಗೆ ಸವಾಲಾಗಿದೆ. ಅದರಲ್ಲೂ ಆರಂಭಿಕ ಆಟಗಾರರಲ್ಲಿ ರೋಹಿತ್ ಶರ್ಮಾಗೆ ಯಾರು ಸಾಥ್ ನೀಡಲಿದ್ದಾರೆ ಎಂಬುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ಆದರೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಕೆಎಲ್ ರಾಹುಲ್ಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುವುದು ಸೂಕ್ತ ಎಂಬ ಮಾತನ್ನು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಕೆಎಲ್ ರಾಹುಲ್ ಅವರನ್ನು ಮೊದಲ ಆರಂಭಿಕ ಆಟಗಾರನಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಯಾಕೆಂದರೆ ಯಾವಾಗೆಲ್ಲಾ ಆತನಿಗೆ ಅವಕಾಶಗಳು ದೊರೆತಿದೆಯೋ ಆಗ ಅವರು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಈ ಸರಣಿಯನ್ನು ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಮುಂಬರುವ ವಿಶ್ವಕಪ್ಗೆ ಸಿದ್ಧತಾ ಪಂದ್ಯ ಎಂದು ಪರಿಗಣಿಸಬೇಕು ಎಂದಿದ್ದಾರೆ.
ಆರಂಭಿಕ ಆಟಗಾರರ ಆಯ್ಕೆಯ ಬಗ್ಗೆ ಸ್ಟಾರ್ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಕೇಳಲಾದ ಪ್ರಶ್ನೆಗೆ ಲಕ್ಷ್ಮಣ್"ಇದೊಂದು ಬಹಳ ಕಠಿಣವಾದ ಪ್ರಶ್ನೆ. ಎರಡನೇ ಆರಂಭಿಕ ಆಟಗಾರ ಯಾರು ಎಂಬುದು. ಮೊದಲನೇ ಆಟಗಾರನಾಗಿ ನಿಸ್ಸಂಶಯವಾಗಿ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ವಿಶ್ವಕಪ್ನ ದೃಷ್ಟಿಯಿಂದ ಕೆಎಲ್ ರಾಹುಲ್ ಅವರನ್ನು ಮೊದಲನೇ ಆಯ್ಕೆಯಾಘಿ ಪರಿಗಣಿಸಿದರೆ ಶಿಖರ್ ಧವನ್ ಅವರನ್ನು ಬ್ಯಾಕ್ಅಪ್ ಆಗಿ ಉಳಿಸಿಕೊಳ್ಳುವುದು ಸೂಕ್ತ ಆಯ್ಕೆಯಾಗಲಿದೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಅವರು ಮುಮದಿನ ಟಿ20 ಸರಣಿಯನ್ನು ಭಾರತ ತನ್ನ ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುವುದಕ್ಕೆ ಬಳಸುವುದು ಉತ್ತಮವಾಗಲಿದೆ ಎಂದಿದ್ದಾರೆ. ಅವರಿಗೆ ಟಿ20 ಆಡುವ ದೇಶಗಳ ಪೈಕಿ ಇಂಗ್ಲೆಂಡ್ ತಂಡ ನಂಬರ್ 1 ಎನ್ನುವುದು ಗೊತ್ತಿದೆ. ಏಕದಿನ ಕ್ರಿಕೆಟ್ನಲ್ಲಿ ಅವರೇನು ಮಾಡಿದರು ಎಂಬುದು ನಮಗೆ ಗೊತ್ತಿದೆ. ಏಕದಿನ ವಿಶ್ವಕಪ್ ಜಯಿಸಲು ಅವರು ಎಷ್ಟು ಚಿತ್ತಹರಿಸಿದ್ದರು ಎಂಬುದು ತಿಳಿಸಿದೆ. ನನ್ನ ಪ್ರಕಾರ ಇಯಾನ್ ಮಾರ್ಗನ್ ಹಾಗೂ ಬಳಗ ಈಗಲೂ ಇದೇ ರೀತಿ ಗುರಿಯನ್ನಿಟ್ಟುಕೊಂಡಿದ್ದಾರೆ" ಎಂದಿದ್ದಾರೆ ಲಕ್ಷ್ಮಣ್