
ಬೆಂಗಳೂರು, ಡಿಸೆಂಬರ್ 21: ಭಾರತದ ಕ್ರಿಕೆಟ್ ದಂತಕತೆ ವಿವಿಎಸ್ ಲಕ್ಷ್ಮಣ್ ಜೀವನಾಧಾರಿತ '281 ಆ್ಯಂಡ್ ಬಿಯಾಂಡ್' ಕೃತಿ ಬೆಂಗಳೂರಿನಲ್ಲಿ ಗುರುವಾರ (ಡಿಸೆಂಬರ್ 20) ಅನಾವರಣಗೊಂಡಿತು. ಅದೂ ಕನ್ನಡದ ಕ್ರಿಕೆಟ್ ದೈತ್ಯರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಕೈಯಿಂದ ಕೃತಿ ಅನಾವರಣಗೊಂಡಿದ್ದು ಅರ್ಥಪೂರ್ಣವೆನಿಸಿತು.
2001ರಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು ಕೋಲ್ಕತ್ತಾದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಲಕ್ಷ್ಮಣ್ ಭರ್ಜರಿ 281 ರನ್ ಬಾರಿಸಿದ್ದರು. ಭಾರತದ ದ್ವಿತೀಯ ಇನ್ನಿಂಗ್ಸ್ ವೇಳೆ 'ವೆರಿವೆರಿ ಸ್ಪೆಷಲ್ ಬ್ಯಾಟ್ಸ್ಮನ್' ಲಕ್ಷ್ಮಣ್ ಈ ಸಾಧನೆ ಮೆರೆದದ್ದರು. ಈ ಪಂದ್ಯದಲ್ಲಿ ಭಾರತ (171 & 657/7d) ತಂಡ ಆಸ್ಟ್ರೇಲಿಯಾ (445 & 212) ಎದುರು ಭರ್ಜರಿ 171 ರನ್ ಗೆಲುವನ್ನಾಚರಿಸಿತ್ತು.
ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಟೆಸ್ಟ್ ಸರಣಿ ಆಡುತ್ತಿದ್ದು, ಲಕ್ಷ್ಮಣ್ ಬದುಕಿನ ಕ್ಷಣ ಎಲ್ಲೋ ಒಂದೆಡೆ ಭಾರತೀಯರಿಗೆ ಸ್ಫೂರ್ತಿಯಾಗಲಿದೆ. ಅಸಲಿಗೆ '281 ಆ್ಯಂಡ್ ಬಿಯಾಂಡ್' ಕೃತಿ 19 ನವೆಂಬರ್ 2018ರಂದೇ ಲೋಕಾರ್ಪಣೆಗೊಂಡಿದೆ. ಆದರೆ ಬೆಂಗಳೂರಿನಲ್ಲಿ ಡಿಸೆಂಬರ್ 20ರಂದು ಕನ್ನಡಿಗರ ಎದುರಲ್ಲಿ ಎರಡನೇ ಸಾರಿ ಕೃತಿ ಬಿಡುಗಡೆಗೊಂಡಿತು.