ಆಗಸ್ಟ್ 4 ಭಾನುವಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮಧ್ಯದಲ್ಲಿ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಭಾರತ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಶ್ರೀಲಂಕಾದ ಸ್ಟಾರ್ ಆಟಗಾರ ಅಲಭ್ಯರಾಗಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡದ ಅಪಾಯಕಾರಿ ಸ್ಪಿನ್ನರ್ ಮತ್ತು ಆಲ್ ರೌಂಡರ್ ವನಿಂದು ಹಸರಂಗಾ ಭಾರತ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದು ಶ್ರೀಲಂಕಾ ತಂಡಕ್ಕೆ ದೊಡ್ಡ ಹೊಡೆತವಾದರೆ, ಭಾರತಕ್ಕೆ ಸಮಾಧಾನದ ಸುದ್ದಿಯಾಗಿದೆ.

ಕೊಲಂಬೊದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವನಿಂದು ಹಸರಂಗ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಭಾರತದ ಬ್ಯಾಟರ್ಸ್ಗೆ ಸಾಕಷ್ಟು ಕಾಟ ನೀಡಿದ್ದರು. ಜೊತೆಗೆ ಪಂದ್ಯವನ್ನು ಟೈ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು.
ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವನಿಂದು ಹಸರಂಗ 3 ವಿಕೆಟ್ ಕಬಳಿಸಿದ್ದರು. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಗಾಯಗೊಂಡಿರುವ ಆಟಗಾರರ ಪಟ್ಟಿ ದೊಡ್ಡದಾಗಿದೆ. ವನಿಂದು ಹಸರಂಗ ಅವರಿಗಿಂತ ಮೊದಲು, ದಿಲ್ಶಾನ್ ಮಧುಶಂಕ (ಮಂಡಿರಜ್ಜು ಗಾಯ) ಮತ್ತು ಮತಿಶ ಪತಿರಣ (ಭುಜದ ಗಾಯ) ಸರಣಿಯ ಆರಂಭಕ್ಕೂ ಮುನ್ನವೇ ಹೊರಗುಳಿದಿದ್ದರು.
ಇದಾದ ನಂತರ ವೇಗದ ಬೌಲರ್ ದುಷ್ಮಂತ ಚಮೀರ (ಬ್ರಾಂಕೈಟಿಸ್ ಮತ್ತು ಉಸಿರಾಟದ ಸೋಂಕು) ಮತ್ತು ನುವಾನ್ ತುಷಾರ (ಹೆಬ್ಬೆರಳು) ಕೂಡ ಎರಡು ಸರಣಿಯಿಂದ ಹೊರ ಬಿದ್ದಿದ್ದರು.
ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವನಿಂದು ಹಸರಂಗ ಸರಣಿಯಿಂದ ಹೊರಗುಳಿದಿರುವುದು ಶ್ರೀಲಂಕಾ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಎಡ ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ಕಾರಣ ಹಸರಂಗ ಭಾರತ ವಿರುದ್ಧ ಏಕದಿನ ಸರಣಿಯಿದ ಹೊರ ನಡೆದಿದ್ದಾರೆ. ಇದೀಗ ಹಸರಂಗ ಸ್ಥಾನಕ್ಕೆ ಬದಲಿ ಆಟಗಾರನಾಗಿ 34 ವರ್ಷದ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಪ್ರಕಾರ, ಮೊದಲ ಏಕದಿನ ಪಂದ್ಯದ ಸಮಯದಲ್ಲಿ ತಮ್ಮ 10ನೇ ಓವರ್ನ ಕೊನೆಯ ಎಸೆತವನ್ನು ಬೌಲಿಂಗ್ ಮಾಡುವಾಗ ವನಿಂದು ಹಸರಂಗಾ ಎಡ ಮಂಡಿರಜ್ಜು ನೋವು ಅನುಭವಿಸಿದ್ದರು. ಇದಾದ ಬಳಿಕ ಎಂಆರ್ಐ ಸ್ಕ್ಯಾನ್ನಲ್ಲಿ ವನಿಂದು ಹಸರಂಗ ಗಾಯಗೊಂಡಿರುವುದು ದೃಢಪಟ್ಟಿದೆ.